ದೇಶ

ಪವಿತ್ರ ಗಂಗಾ ನದಿ ಮೇಲೆ ದೋಣಿಯಲ್ಲಿ ಹುಕ್ಕಾ, ಮಾಂಸಾಹಾರ ಸೇವನೆ: ಪ್ರಕರಣ ದಾಖಲು

Srinivasamurthy VN

ಪ್ರಯಾಗ್ ರಾಜ್: ಹಿಂದೂಗಳ ಪವಿತ್ರ ನದಿ ಎಂದೇ ಕರೆಯಲಾಗುವ ಗಂಗಾ ನದಿ ಮೇಲೆ ದೋಣಿಯಲ್ಲಿ ಹುಕ್ಕಾ, ಮಾಂಸಾಹಾರ ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

ಪವಿತ್ರ ಸಂಗಮದ ಬಳಿ ಗಂಗಾನದಿಯಲ್ಲಿ ಆರು ಮಂದಿ ದೋಣಿ ವಿಹಾರಿಗರು ತಮ್ಮ ದೋಣಿಯಲ್ಲೇ ಮಾಂಸಾಹಾರ ಅಡುಗೆ ಮಾಡಿ ಹುಕ್ಕಾ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಇದೇ ವಿಚಾರವಾಗಿ ಪ್ರಯಾಗ್ ರಾಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರು ಜನರ ಪೈಕಿ ಇಬ್ಬರನ್ನು ಗುರುತಿಸಲಾಗಿದ್ದು, ಆದರೆ ಅವರು ತಲೆಮರೆಸಿಕೊಂಡಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ಇಬ್ಬರನ್ನು ಅಜಾಫ್ ಮತ್ತು ಹಾಸನ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಐಪಿಸಿಯ ಸೆಕ್ಷನ್ 153 ಎ (ಧರ್ಮ, ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 (ಆರಾಧನಾ ಸ್ಥಳವನ್ನು ಅಪವಿತ್ರಗೊಳಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇವರಿಬ್ಬರು ದರಗಂಜ್‌ನ ಬಕ್ಷಿ ಖುರ್ದ್ ನಿವಾಸಿಗಳಾಗಿದ್ದಾರೆ. ಅವರು ತಲೆಮರೆಸಿಕೊಂಡಿದ್ದು, ಉಳಿದ ನಾಲ್ವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ದಾಖಲಾದ ಎಫ್‌ಐಆರ್‌ನಲ್ಲಿ, ಆರು ಮಂದಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. 30 ಸೆಕೆಂಡುಗಳ ವೀಡಿಯೊವು ಪ್ರಯಾಗ್‌ರಾಜ್‌ನ ದಾರಗಂಜ್‌ಗೆ ಸಮೀಪದ ಗಂಗಾನದಿಯ ಸಂಗಮದಲ್ಲಿ ಚಲಿಸುವ ದೋಣಿಯಲ್ಲಿ ಕೆಲ ಪುರುಷರು ಮಾಂಸಾಹಾರ ಆಡುಗೆ ತಯಾರಿಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಹುಕ್ಕಾ ಸೇವನೆ ಮಾಡುತ್ತಿರುವ ದೃಶ್ಯವನ್ನು ಸೆರೆಯಾಗಿತ್ತು. 

ಈ ಸಂಬಂಧ ಮಾಹಿತಿ ನೀಡಿರುವ ಸರ್ಕಲ್ ಆಫೀಸರ್ ಆಸ್ತಾ ಜೈಸ್ವಾಲ್ ಅವರು, ದಾರಗಂಜ್ ಯಾತ್ರಾ ಕ್ಷೇತ್ರವಾಗಿದ್ದು, ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದನ್ನೂ ಮಾಡಬಾರದು ಎಂದು ಜನರು ನಿರೀಕ್ಷಿಸುತ್ತಾರೆ. ಗಂಗಾ ನದಿಯಲ್ಲಿ ದೋಣಿಯಲ್ಲಿ ಮಾಂಸವನ್ನು ಬೇಯಿಸುವುದು ಇಲ್ಲಿಗೆ ಬರುವ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ" ಎಂದು ಹೇಳಿದ್ದಾರೆ.

ಮಂಗಳವಾರ ವಿಡಿಯೋ ಹೊರಬಿದ್ದ ನಂತರ ಬಕ್ಷಿ ಹೊರಠಾಣೆ ಉಸ್ತುವಾರಿ ದಿವಾಕರ್ ಸಿಂಗ್ ಅವರ ದೂರಿನ ಮೇರೆಗೆ ಇಬ್ಬರು ಹೆಸರಿನ ಮತ್ತು ನಾಲ್ಕು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
 

SCROLL FOR NEXT