ದೇಶ

ಅನರ್ಹತೆ ಭೀತಿ ನಡುವೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ರಿಂದ ಸೋಮವಾರ ವಿಶ್ವಾಸಮತ ಯಾಚನೆ

Lingaraj Badiger

ರಾಂಚಿ: ಶಾಸಕ ಸ್ಥಾನದಿಂದ ಅನರ್ಹತೆ ಭೀತಿ ನಡುವೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ವಿಧಾನಸಭೆಯ ಸೆಕ್ರೆಟರಿಯೇಟ್ ಶಾಸಕರಿಗೆ ಕಳುಹಿಸಿರುವ ಪತ್ರದ ಪ್ರಕಾರ, ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸಲು ವಿಶ್ವಾಸಮತ ಯಾಚಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಸದನದಲ್ಲಿ ತನ್ನ ಕಾರ್ಯತಂತ್ರ ರೂಪಿಸಲು ಪ್ರತಿಪಕ್ಷ ಬಿಜೆಪಿ ಭಾನುವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

"ಜಾರ್ಖಂಡ್‌ನಲ್ಲಿ ಗೊಂದಲದ ಸ್ಥಿತಿ ಇದೆ. ನಮ್ಮ ನಿಯೋಗವು ರಾಜ್ಯಪಾಲರನ್ನು(ಗುರುವಾರ) ಭೇಟಿ ಮಾಡಿತು ಮತ್ತು ಅವರು ಒಂದು ಅಥವಾ ಎರಡು ದಿನಗಳಲ್ಲಿ ಗೊಂದಲ ನಿವಾರಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ. ಆದ್ದರಿಂದ ನಾವು ವಿಧಾನಸಭೆಯಲ್ಲಿ ನಮ್ಮ ಅಂಶಗಳನ್ನು ಪ್ರಸ್ತಾಪಿಸಿ ನಮ್ಮ ಬಹುಮತವನ್ನು ಸಾಬೀತುಪಡಿಸುತ್ತೇವೆ ಎಂದು ಜಾರ್ಖಂಡ್ ಸಂಸದೀಯ ವ್ಯವಹಾರಗಳ ಸಚಿವ ಅಲಂಗೀರ್ ಆಲಂ ಅವರು ಹೇಳಿದ್ದಾರೆ.

ಲಾಭದಾಯ ಹುದ್ದೆ ಹೊಂದಿದ ಪ್ರಕರಣದಲ್ಲಿ ಸೋರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮನವಿ ಸಲ್ಲಿಸಿದ ನಂತರ ಚುನಾವಣಾ ಆಯೋಗವು ಆಗಸ್ಟ್ 25 ರಂದು ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ತನ್ನ ನಿರ್ಧಾರವನ್ನು ಕಳುಹಿಸಿದೆ. ಆದರೆ ಆ ನಿರ್ಧಾರ ಏನೂ ಎಂಬುದು ಇದುವರೆಗೂ ಬಹಿರಂಗವಾಗಿಲ್ಲ. ಹೀಗಾಗಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

ಚುನಾವಣಾ ಆಯೋಗದ ನಿರ್ಧಾರ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲವಾದರೂ, ಚುನಾವಣಾ ಆಯೋಗ ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಶಿಫಾರಸು ಮಾಡಿದೆ ಎಂಬ ವದಂತಿಗಳಿವೆ.

SCROLL FOR NEXT