ದೇಶ

ಮೂಸೆವಾಲಾ ಹತ್ಯೆ ಪ್ರಕರಣ: 3 ರಾಜ್ಯಗಳ 60 ಕಡೆ NIA ದಾಳಿ, ಗ್ಯಾಂಗ್ ಸ್ಟರ್ ಗಳ ನಿವಾಸದಲ್ಲಿ ತೀವ್ರ ಶೋಧ

Srinivasamurthy VN

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (National Investigation Agency – NIA) ದೇಶದ 3 ರಾಜ್ಯಗಳಲ್ಲಿ ಗ್ಯಾಂಗ್ ಸ್ಟರ್ ಗಳಿಗೆ ಸಂಬಂಧಿಸಿದ 60 ಜಾಗಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಲಾರೆನ್ಸ್​ ಬಿಷ್ಣೋಯ್, ಗೋಲ್ಡೀ ಬ್ರಾರ್ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆಸಿದ್ದು, ಸಿಧು ಮೂಸೆ ವಾಲಾ ಕೊಲೆಯಲ್ಲಿ ಭೂಗತ ಲೋಕದ ಈ ದುಷ್ಕರ್ಮಿಗಳು ವಹಿಸಿದ್ದ ಪಾತ್ರದ ಬಗ್ಗೆ ಎನ್​ಐಎ ಮಾಹಿತಿ ಕಲೆ ಹಾಕುತ್ತಿದೆ. ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್) ಮತ್ತು ಹರಿಯಾಣದ ಯಮುನಾ ನಗರ, ಮಜಿತಾ ರಸ್ತೆ, ಮುಕ್ತ್‌ಸರ್, ಗುರುದಾಸ್‌ಪುರ ಮತ್ತು ಗುರುಗ್ರಾಮ್‌ ಸೇರಿದಂತೆ ಒಟ್ಟು 60ವಿವಿಧ ಸ್ಥಳಗಳಲ್ಲಿ ಎನ್​ಐಎ ಸಿಬ್ಬಂದಿ ಶೋಧ ಆರಂಭಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಂಜಾಬ್‌ನಲ್ಲಿ ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ಆರೋಪದ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ರೀತಿ ಕಳ್ಳಸಾಗಣೆಯಲ್ಲಿ ಬಂದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. 

ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ (Congress) ಸೇರಿದ್ದ ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ (Sidhu Moose Wala) ಅವರನ್ನು ಕಳೆದ ಮೇ ತಿಂಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೂಸೆ ವಾಲಾ ಅವರು ಮಾನ್ಸಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಮ್​ ಆದ್ಮಿ ಪಾರ್ಟಿಯ ಡಾ.ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸಿಧು ಮೂಸೆ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಬೆನ್ನಲ್ಲೇ ಸಿಧು ಮೂಸೆವಾಲಾ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಮೂಸೆ ವಾಲಾ ಮೇ 29 ರಂದು ತನ್ನ ಸ್ನೇಹಿತ ಮತ್ತು ಸೋದರಸಂಬಂಧಿಯೊಂದಿಗೆ ಜವಾಹರ್ ಕೆ ಗ್ರಾಮಕ್ಕೆ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಾನ್ಸಾದಲ್ಲಿ ಕೊಲ್ಲಲ್ಪಟ್ಟಿದ್ದರು. 

ಮೂಸೆವಾಲಾ ಕೊಲೆಯ ಹೊಣೆಯನ್ನು ಹಲವಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಹೊತ್ತುಕೊಂಡಿದ್ದಾರೆ. ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್ ಪರವಾಗಿ ತಾನೇ ಈ ಕೊಲೆ ಮಾಡಿದ್ದಾಗಿ ಗೋಲ್ಡಿ ಬ್ರಾರ್ ಎನ್ನುವಾತ ಹೇಳಿಕೊಂಡಿದ್ದ. ಮೂಸೆವಾಲಾರ ಮೃತ ದೇಹದಲ್ಲಿ 25 ಗುಂಡುಗಳು ನುಗ್ಗಿದ್ದ ಗಾಯದ ಗುರುತುಗಳಿದ್ದವು. ಈ ಘಟನೆ ಪಂಜಾಬ್​ನಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿತ್ತು. ಮೂಸೆವಾಲಾ ಹತ್ಯೆ ಪ್ರಕರಣವನ್ನು ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ 23 ಜನರನ್ನು ಬಂಧಿಸಿದ್ದಾರೆ. ಹತ್ಯೆಯಾಗುವ ಒಂದು ದಿನದ ಹಿಂದೆ, ಪಂಜಾಬ್ ಪೊಲೀಸರು ಮೂಸೆವಾಲ ಅವರ ಭದ್ರತೆಯನ್ನು ಕಡಿತ ಮಾಡಿದ್ದರು.
 

SCROLL FOR NEXT