ಕಿಯೋಂಜಾರ್: ಒಡಿಶಾದ ಕಿಯೋಂಜಾನ್ ನಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ಕು ನವಜಾತ ಶಿಶುಗಳು ಮೃತಪಟ್ಟಿವೆ. ಚಿಕಿತ್ಸೆಯಲ್ಲಿನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಎಸ್ಎನ್ ಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶುಗಳು ಆಕ್ಸಿಜನ್ ಪೂರೈಕೆ ಇಲ್ಲದೇ ಸಾವನ್ನಪ್ಪಿವೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಆಕ್ಸಿಜನ್ ಪೂರೈಕೆಯ ಕೊರತೆಯಷ್ಟೇ ಅಲ್ಲದೇ ರಾತ್ರಿ ವೇಳೆ ಶಿಶುಗಳ ಪರಿಸ್ಥಿತಿ ಚಿಂತಾಜನಕವಾದಾಗ ಕರ್ತವ್ಯ ನಿರತ ವೈದ್ಯರು ಅಲ್ಲಿ ಇರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಎಸ್ಎನ್ ಸಿ ಯು ಒಳಗೆ ನಮಗೆ ಪ್ರವೇಶವಿಲ್ಲದ ಕಾರಣ ಅಲ್ಲಿ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲಾಯಿತೋ ಇಲ್ಲವೋ ಎಂಬುದೂ ತಿಳಿಯಲಿಲ್ಲ. ಶನಿವಾರ ರಾತ್ರಿ ವೈದ್ಯರು ಇರಲಿಲ್ಲ ಹಾಗೂ ನರ್ಸ್ ಗಳು ಆಕ್ಸಿಜನ್ ಕೊರತೆಯನ್ನು ನಿಭಾಯಿಸಲು ಯತ್ನಿಸುತ್ತಿದ್ದರು ಎಂದು ಮಗುವಿನ ತಾಯಿಯೊಬ್ಬರು ಹೇಳಿದ್ದಾರೆ.
ಪೋಷಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿ ಡಾ. ಸುಜಾತಾ ರಾಣಿ ಮಿಶ್ರಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ 18 ದಿನಗಳಲ್ಲಿ 13 ಮಕ್ಕಳು ಸಾವನ್ನಪ್ಪಿವೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಕಡಿಮೆ ತೂಕ ಹಾಗೂ ಮನೆಯಲ್ಲಿ ಹೆರಿಗೆಯಾದ ಉಂಟಾದ ಸಮಸ್ಯೆಗಳಿಂದ ಶಿಶುಗಳು ಸಾವನ್ನಪ್ಪಿವೆ. ಒಂದು ತಿಂಗಳ ಅವಧಿಯಲ್ಲಿ ಈ ಆಸ್ಪತ್ರೆಗೆ 128 ಶಿಶುಗಳು ದಾಖಲಾಗಿದ್ದವು.