ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯೊಂದು ಮುನ್ನೆಲೆಗೆ ಬಂದಿದೆ. ರತ್ನಿಪೋರಾದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಗಾಯಗೊಂಡ ಇಬ್ಬರು ಕಾರ್ಮಿಕರು ಬಿಹಾರದ ಬೆಟ್ಟಿಯಾ ಜಿಲ್ಲೆಯ ನಿವಾಸಿಗಳು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಭಯೋತ್ಪಾದಕರ ಘಟನೆಯ ನಂತರ, ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದು ಉಗ್ರರ ಪತ್ತೆಗಾಗಿ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗಾಯಾಳುಗಳನ್ನು ಬಿಹಾರದ ಬೆಟ್ಟಿಯಾ ಜಿಲ್ಲೆಯ ನಿವಾಸಿಗಳಾದ ಶಂಶಾದ್ ಮತ್ತು ಫೈಜಾನ್ ಕಸ್ರಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 5ರಂದು ಕೂಡ ದಾಳಿ ನಡೆದಿತ್ತು
ಆಗಸ್ಟ್ 5ರಂದು ಸಹ ಪುಲ್ವಾಮಾದ ಗದೂರ ಪ್ರದೇಶದಲ್ಲಿ ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದರು. ಈ ಭಯೋತ್ಪಾದಕ ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದರು. ಉಗ್ರರ ದಾಳಿಗೆ ಬಲಿಯಾದವರು ಬಿಹಾರ ಮೂಲದ ಕಾರ್ಮಿಕರು. ಆಗಸ್ಟ್ 5 370ನೇ ವಿಧಿಯನ್ನು ರದ್ದುಗೊಳಿಸಿದ ಮೂರನೇ ವಾರ್ಷಿಕೋತ್ಸವವಾಗಿತ್ತು.