ಮುಂಬೈ: ಭಾರತದ ಹೆಬ್ಬಾಗಿಲು ಎಂಬ ಖ್ಯಾತಿ ಪಡೆದಿರುವ ವಾಣಿಜ್ಯ ನಗರಿ ಮುಂಬೈನ ಗೇಟ್ವೇ ಆಫ್ ಇಂಡಿಯಾದ ಮೇಲ್ಮೈಯಲ್ಲಿ ಕೆಲವು ಬಿರುಕುಗಳು ಕಂಡುಬಂದಿವೆ. ಆದರೆ ಒಟ್ಟಾರೆ ಕಟ್ಟಡ ಉತ್ತಮ ಸ್ಥಿತಿಯಲ್ಲಿರುವುದು ಕಂಡುಬಂದಿದೆ ಎಂದು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಲಾಯಿತು.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಲಿಖಿತ ಪ್ರತಿಕ್ರಿಯೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಮುಂಬೈನ "ಗೇಟ್ವೇ ಆಫ್ ಇಂಡಿಯಾ, ಕೇಂದ್ರೀಯ-ರಕ್ಷಿತ ಸ್ಮಾರಕವಲ್ಲ. ಇದು ಮಹಾರಾಷ್ಟ್ರ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ರಕ್ಷಣೆಯಲ್ಲಿದೆ. ಪರಿಶೀಲನೆಯ ಸಮಯದಲ್ಲಿ ಮೇಲ್ಮೈಯಲ್ಲಿ ಕೆಲವು ಬಿರುಕುಗಳು ಕಂಡುಬಂದಿವೆ. ಒಟ್ಟಾರೆ ಕಟ್ಟಡದ ಸಂರಕ್ಷಣೆ ಉತ್ತಮ ಸ್ಥಿತಿಯಲ್ಲಿದೆ ಎಂದರು.
ಈ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಯೇ ಮತ್ತು ಹಾಗಿದ್ದರೆ, ವರದಿಯಲ್ಲಿನ ಅಂಶಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ ಎಂದು ತಿಳಿಸಿದರು. ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯದಿಂದ ಸರ್ಕಾರವು ಪುನರ್ ಸ್ಥಾಪನೆ ಪ್ರಸ್ತಾವನೆಯನ್ನು ಸ್ವೀಕರಿಸಿದೆಯೇ ಎಂಬ ಬಗ್ಗೆ ರೆಡ್ಡಿ ಅವರು ಕೇಂದ್ರ ಸರ್ಕಾರ ಅಂತಹ ಯಾವುದೇ ಪ್ರಸ್ತಾಪವನ್ನು ಸ್ವೀಕರಿಸಿಲ್ಲ' ಎಂದು ಹೇಳಿದರು.
ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯು ಗೇಟ್ವೇ ಆಫ್ ಇಂಡಿಯಾದ ಸಂರಕ್ಷಣೆ ಮತ್ತು ದುರಸ್ತಿಗಾಗಿ ಅಂದಾಜು ರೂ 8,98,29,574' ಮೊತ್ತದ ವಿವರವಾದ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದ್ದು, ಮಹಾರಾಷ್ಟ್ರ ಸರ್ಕಾರದ 'ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ಮಾರ್ಚ್ 10 ರಂದು ಮಹಾರಾಷ್ಟ್ರ ಇದನ್ನು ಅನುಮೋದಿಸಿದೆ ಎಂದು ಅವರು ತಿಳಿಸಿದರು.
1911 ರ ಡಿಸೆಂಬರ್ನಲ್ಲಿ ಬ್ರಿಟಿಷ್ ದೊರೆ 5ನೇ ಕಿಂಗ್ ಜಾರ್ಜ್ ಆಗಮನದ ಸ್ಮರಣಾರ್ಥವಾಗಿ ಗೇಟ್ವೇ ಆಫ್ ಇಂಡಿಯಾವನ್ನು ನಿರ್ಮಿಸಲಾಗಿದೆ. 1924 ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.