ದೇಶ

ಕಾಶ್ಮೀರಿ ಪಂಡಿತರ ನಿರ್ಗಮನ ಕುರಿತು ಆಜಾದ್ ಹೇಳಿಕೆ ನಿಜವಾದ ಅಪರಾಧಿಗಳಿಗೆ 'ಜಾಮೀನು' ಕೊಟ್ಟಂತೆ: ಬಿಜೆಪಿ

Vishwanath S

ಶ್ರೀನಗರ: ತಮ್ಮ ಆತ್ಮಚರಿತ್ರೆ 'ಆಜಾದ್'ನಲ್ಲಿ ಕಾಶ್ಮೀರಿ ಪಂಡಿತರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ(ಬಿಜೆಪಿ) ಜಮ್ಮು ಮತ್ತು ಕಾಶ್ಮೀರ ಘಟಕ ಶುಕ್ರವಾರ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕಣಿವೆಯಿಂದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ವಲಸೆ ಹೋಗುವುದಕ್ಕೆ ಆಜಾದ್ ನೀಡಿದ ಕಾರಣಗಳು "ನಿಜವಾದ ಅಪರಾಧಿಗಳಿಗೆ ಜಾಮೀನು ಕೊಟ್ಟಂತೆ" ಎಂದು ಬಿಜೆಪಿ ಹೇಳಿದೆ.

ಬಿಜೆಪಿ ವಕ್ತಾರ ಮತ್ತು ಮಾಜಿ ಶಾಸಕ ಗಿರ್ಧಾರಿ ಲಾಲ್ ರೈನಾ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಆತ್ಮಚರಿತ್ರೆಯಲ್ಲಿ ಆಜಾದ್ ಕಾಶ್ಮೀರಿ ಪಂಡಿತ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ. 1989-90ರಲ್ಲಿ ಕಾಶ್ಮೀರ ಕಣಿವೆಯಿಂದ ಧಾರ್ಮಿಕವಾಗಿ ಅಲ್ಪಸಂಖ್ಯಾತ ಕಾಶ್ಮೀರಿ ಹಿಂದೂಗಳನ್ನು ಬಲವಂತವಾಗಿ ಸ್ಥಳಾಂತರಿಸಿದ್ದಕ್ಕೆ ನಾವು ಆಜಾದ್ ಅವರನ್ನು ಸಮಾನ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 'ಸಾವು ಮತ್ತು ವಿನಾಶಕ್ಕೆ ಜವಾಬ್ದಾರರಾಗಿರುವ' ಜನರಲ್ಲಿ ಅವರು ಒಬ್ಬರು ಎಂದು ವಿವರಿಸಿದ ರೈನಾ, ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಏಕಪಕ್ಷೀಯ ದಾಳಿಯ ಬಗ್ಗೆ ಉದ್ದೇಶಪೂರ್ವಕ ಮೌನವು ಎಲ್ಲರಿಗೂ ತಿಳಿದಿದೆ. ಆಜಾದ್ ಯಾವಾಗಲೂ ಕಾಂಗ್ರೆಸ್ ಪಕ್ಷ ಮತ್ತು ಅದರ ಸರ್ಕಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳನ್ನು ಹೊಂದಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿನ ಘಟನೆಗಳ ಹೊಣೆಗಾರಿಕೆಯಿಂದ ಅವರು ಯಾವುದೇ ರೀತಿಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೂ ಸಮುದಾಯದ ಸ್ಥಳಾಂತರಕ್ಕೆ ಕಾರಣವಾದ ಘಟನೆಗಳ ಕುರಿತು ಆಜಾದ್ ಅವರ ವಿವರಣೆಯು 'ಸಂಕುಚಿತ ಚುನಾವಣಾ ಲಾಭಕ್ಕಾಗಿ ಇತರರ ಮೇಲೆ ಆರೋಪ ಹೊರಿಸುವ ತಂತ್ರ' ಎಂದು ಅವರು ಹೇಳಿದರು.

ರಾಜೀವ್ ಗಾಂಧಿ-ಫಾರೂಕ್ ಒಪ್ಪಂದಕ್ಕೆ ಸಹಿ ಹಾಕಿದಾಗ ಮತ್ತು ಜಮ್ಮು ಮತ್ತು ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಸರ್ಕಾರ 1989ರಲ್ಲಿ 70 ಭಯೋತ್ಪಾದಕರನ್ನು ಬಿಡುಗಡೆ ಮಾಡಿದಾಗಲೂ ಆಜಾದ್ ಅಲ್ಲಿದ್ದರು. 1989ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮನೆಗಳ ಮೇಲೆ ಕಲ್ಲು ತೂರಾಟ ಮತ್ತು ಭಯೋತ್ಪಾದನೆಯ ವಾತಾವರಣವನ್ನು ಅವರು ಹೇಗೆ ನಿರ್ಲಕ್ಷಿಸಬಹುದು ಎಂದು ಪ್ರಶ್ನಿಸಿದರು.

ಪನ್ನುನ್ ಕಾಶ್ಮೀರದ ಅಧ್ಯಕ್ಷ ಅಜಯ್ ಚಾರುಂಗೂ ಸಹ ಕಾಶ್ಮೀರಿ ಪಂಡಿತರ ನಿರ್ಗಮನದ ಕುರಿತು ಆಜಾದ್ ಅವರ ಕಾಮೆಂಟ್‌ಗಳಿಗಾಗಿ ಕಿಡಿಕಾರಿದ್ದು, ಆಜಾದ್ ಕೂಡ ಜಾತ್ಯತೀತತೆಯ ವೇಷ ಧರಿಸಿರುವ ಕೋಮುವಾದಿ ನಾಯಕ ಎಂದು ಬಣ್ಣಿಸಿದರು.

SCROLL FOR NEXT