ದೇಶ

ಗಾಯಗೊಂಡಿದ್ದ ಸರಸ್ ಕೊಕ್ಕರೆಗೆ ಆಸರೆ; ಅರಣ್ಯ ಇಲಾಖೆ ಕರೆದೊಯ್ದಿದ್ದ ಕೊಕ್ಕರೆ ಮತ್ತು ಆರಿಫ್‌ ಮತ್ತೆ ಒಂದಾಗಬೇಕು ಎಂದ ವರುಣ್ ಗಾಂಧಿ

Ramyashree GN

ನವದೆಹಲಿ: ಸರಸ್ ಕೊಕ್ಕರೆಯನ್ನು ಮೃಗಾಲಯದಿಂದ ಬಿಡುಗಡೆ ಮಾಡಲು ಮತ್ತು ಅದನ್ನು ಆರೀಫ್ ಖಾನ್ ಅವರೊಂದಿಗೆ ಮತ್ತೆ ಸೇರಿಸಲು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಬುಧವಾರ ಒತ್ತಾಯಿಸಿದರು. ಕಾನೂನುಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆಯು ಕೊಕ್ಕರೆಯನ್ನು ಕೊಂಡೊಯ್ಯುವ ಸುಮಾರು ಒಂದು ವರ್ಷ ಆರಿಫ್ ಅವರು ಪಕ್ಷಿಗೆ ಶುಶ್ರೂಷೆ ಮಾಡಿದ್ದರು.

ಅವರ ಕಥೆ ವಿಶೇಷವಾಗಿದೆ, ಇತ್ತೀಚೆಗೆ ಕಾನ್ಪುರ ಮೃಗಾಲಯಕ್ಕೆ ಭೇಟಿ ನೀಡಿದ್ದ ಅಮೇಥಿ ಜಿಲ್ಲೆಯ ಮಂಡ್ಖಾ ಗ್ರಾಮದ ನಿವಾಸಿ ಆರಿಫ್ ಅವರನ್ನು ಕಂಡ ಸರಸ್ ಕ್ರೇನ್ ತಾನಿದ್ದಲ್ಲಿಯೇ ಉತ್ಸಾಹದಿಂದ ಕುಣಿದಾಡಿರುವ ವಿಡಿಯೋದೊಂದಿಗೆ ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

'ಒಬ್ಬರನ್ನೊಬ್ಬರು ನೋಡುವುದರಲ್ಲಿ ಅವರ ಸಂತೋಷವು ಇಬ್ಬರು ಸ್ನೇಹಿತರ ನಡುವಿನ ಮುಗ್ಧ ಮತ್ತು ಪವಿತ್ರ ಪ್ರೀತಿಯನ್ನು ಒತ್ತಿಹೇಳುತ್ತದೆ. ಈ ಸುಂದರವಾದ ಪಕ್ಷಿಯು ಮುಕ್ತವಾಗಿ ಹಾರಲು ಬಯಸಿದೆ ಮತ್ತು ಪಂಜರದಲ್ಲಿ ವಾಸಿಸಲು ಅಲ್ಲ' ಎಂದು ಅವರು ಹೇಳಿದರು.

ಅದು (ಪಕ್ಷಿ) ತನ್ನ ಆಕಾಶ, ಸ್ವಾತಂತ್ರ್ಯ ಮತ್ತು ಸ್ನೇಹಿತನನ್ನು ಮತ್ತೆ ಸೇರಬೇಕು ಎಂದು ಪಿಲಿಭಿತ್ ಸಂಸದರು ಹೇಳಿದರು.
ಸರಸ್ ಕ್ರೇನ್ ಮತ್ತು ಅದರ ರಕ್ಷಕನ ಸಂತೋಷದ ವಿಡಿಯೋಗಳು ವೈರಲ್ ಆದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದರು ಮತ್ತು ಕಾನೂನುಗಳನ್ನು ಉಲ್ಲೇಖಿಸಿ ಆ ಹಕ್ಕಿಯನ್ನು ತೆಗೆದುಕೊಂಡು ಹೋಗಿದ್ದರು. ಕಾನೂನಿನ ಪ್ರಕಾರ, ಪಕ್ಷಿಯನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಕಾನೂನುಬಾಹಿರ ಎಂದು ವಾದಿಸಿದರು. ಅವರ ವಿರುದ್ಧ ಕಾನೂನು ಕ್ರಮವನ್ನೂ ಆರಂಭಿಸಿದ್ದರು.

ಸಮಾಜವಾದಿ ಪಕ್ಷವು ಕೂಡ ಆರಿಫ್ ಖಾನ್ ಬೆಂಬಲಕ್ಕೆ ಬಂದು, ಸರ್ಕಾರದ ಕ್ರಮವನ್ನು ಟೀಕಿಸಿದ್ದರಿಂದ ಕಥೆ ರಾಜಕೀಯ ತಿರುವು ಪಡೆದುಕೊಂಡಿದೆ.

SCROLL FOR NEXT