ದೇಶ

ವಿಡಿಯೋ: ಪಿಂಚಣಿಗಾಗಿ ಮುರಿದ ಕುರ್ಚಿಯ ಸಹಾಯದಿಂದ ಕಿಲೋಮೀಟರ್‌ಗಟ್ಟಲೆ ಬರಿಗಾಲಿನಲ್ಲಿ ನಡೆದ 70 ವರ್ಷದ ಅಜ್ಜಿ

Ramyashree GN

ಜರಿಗಾಂವ್: ಒಡಿಶಾದಿಂದ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, 70 ವರ್ಷದ ಮಹಿಳೆಯೊಬ್ಬರು ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಸುಡುವ ಬಿಸಿಲಿನಲ್ಲಿ ಹಲವಾರು ಕಿಲೋಮೀಟರ್‌ಗಳವರೆಗೆ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದ ಪ್ರಕಾರ, ವಯೋವೃದ್ಧೆಯೊಬ್ಬರು ಮುರಿದ ಪ್ಲಾಸ್ಟಿಕ್ ಕುರ್ಚಿಯ ಸಹಾಯದಿಂದ ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲೇ ನಡೆಯುವುದನ್ನು ಕಾಣಬಹುದು. ಏಪ್ರಿಲ್ 17 ರಂದು ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಜರಿಗಾಂವ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ.

ಸೂರ್ಯ ಹರಿಜನ ಎಂಬ ವೃದ್ಧೆಯದು ಬಡತನದ ಕುಟುಂಬ. ಆಕೆಯ ಹಿರಿಯ ಮಗ ಬೇರೆ ರಾಜ್ಯದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಅವರು ತಮ್ಮ ಕಿರಿಯ ಮಗನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಆತ ಇತರರ ದನಗಳನ್ನು ಮೇಯಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾರೆ. ಉಳುಮೆ ಮಾಡಲು ಜಮೀನಿಲ್ಲದ ಈ ಕುಟುಂಬ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದೆ.

ವೃದ್ಧೆಯು ಪಿಂಚಣಿ ಪಡೆಯಲು ಬ್ಯಾಂಕ್‌ಗೆ ಹೋದರು. ಆದರೆ, ಆಕೆಯ ಹೆಬ್ಬೆರಳಿನ ಗುರುತು ದಾಖಲೆಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದರು. ಇದರಿಂದ ಅವರು ಮತ್ತೆ ಮನೆಗೆ ಮರಳುವಂತೆ ಒತ್ತಾಯಿಸಲಾಯಿತು.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮ್ಯಾನೇಜರ್, 'ತನ್ನ 'ಮುರಿದ ಬೆರಳುಗಳಿಂದ' ಹಣವನ್ನು ಹಿಂಪಡೆಯಲು ತೊಂದರೆಯನ್ನು ಎದುರಿಸುತ್ತಿದ್ದಾರೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ' ಎಂದು ಹೇಳಿದ್ದಾರೆ.

'ವೃದ್ಧೆಯ ಬೆರಳುಗಳು ಮುರಿದುಹೋಗಿವೆ. ಆದ್ದರಿಂದ ಆಕೆಯು ಪಿಂಚಣಿಯನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದಾಳೆ. ಆಕೆಗೆ ಬ್ಯಾಂಕ್‌ನಿಂದ ಕೈಯಾರೆ 3,000 ರೂ.ಗಳನ್ನು ನೀಡಿದ್ದೇವೆ. ನಾವು ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ' ಎಂದು ಜರಿಗಾಂವ್ ಶಾಖೆಯ ಎಸ್‌ಬಿಐ ವ್ಯವಸ್ಥಾಪಕರು ಹೇಳಿದರು.

ಅವರ ಗ್ರಾಮದ ಸರಪಂಚರು ಕೂಡ ಗ್ರಾಮದಲ್ಲಿ ಇಂತಹ ಅಸಹಾಯಕರ ಪಟ್ಟಿ ಮಾಡಿ ಅವರಿಗೆ ಪಿಂಚಣಿ ಹಣ ನೀಡುವ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.

SCROLL FOR NEXT