ದೇಶ

ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್‌ರ ದೆಹಲಿ ನಿವಾಸದಲ್ಲಿ ಸಿಬಿಐ ತಂಡ

Ramyashree GN

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ವಿಮಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. 

ಸಿಬಿಐ ತಂಡವೊಂದು ಬೆಳಗ್ಗೆ 11.45ರ ಸುಮಾರಿಗೆ ರಾಷ್ಟ್ರ ರಾಜಧಾನಿಯ ಆರ್‌ಕೆ ಪುರಂ ಪ್ರದೇಶದಲ್ಲಿರುವ ಮಲಿಕ್‌ರ ಸೋಮ್ ವಿಹಾರ್ ನಿವಾಸಕ್ಕೆ ಆಗಮಿಸಿ ಅವರಿಂದ ಕೆಲಸ ಸ್ಪಷ್ಟನೆ ಕೇಳಿದೆ ಎಂದು ಅವರು ತಿಳಿಸಿದ್ದಾರೆ.

ಮಲಿಕ್ ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಆರೋಪಿ ಅಥವಾ ಶಂಕಿತರಲ್ಲ ಎಂದು ಅವರು ಹೇಳಿದ್ದಾರೆ.

ವಿವಿಧ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಮಲಿಕ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಶ್ನಿಸುತ್ತಿರುವುದು ಕಳೆದ ಏಳು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಗೋವಾ ಮತ್ತು ಮೇಘಾಲಯದಲ್ಲಿ ರಾಜ್ಯಪಾಲರ ಜವಾಬ್ದಾರಿಯನ್ನು ಮುಗಿಸಿದ ನಂತರ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು.

ಸರ್ಕಾರಿ ನೌಕರರಿಗೆ ವೈ ದ್ಯಕೀಯ ವಿಮೆ ಒದಗಿಸುವುದಕ್ಕೆ ಸಂಬಂಧಿಸಿದ ಗುತ್ತಿಗೆ ನೀಡುವಲ್ಲಿ ಹಾಗೂ ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ 2,200 ಕೋಟಿ ರೂ. ಮೊತ್ತದ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಮಲಿಕ್ ಆರೋ ಪಿಸಿದ್ದರು. ಈ ಸಂಬಂಧ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿಬಿಐ ಎರಡು ಎಫ್ಐಆರ್‌ಗಳನ್ನು ದಾಖಲಿಸಿತ್ತು.

ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಒದಗಿಸುವಂತೆ ಸಿಬಿಐ ಅಧಿಕಾರಿಗಳು ಮಲಿಕ್ ಅವರನ್ನು ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. 

ಅವರಿಂದ ಸ್ಪಷ್ಟನೆ ಕೇಳಲು ಸಿಬಿಐ ಇತ್ತೀಚೆಗೆ ನೋಟಿಸ್ ಜಾರಿ ಮಾಡಿತ್ತು. ನಂತರ ಮಲಿಕ್ ಅವರು ಟ್ವೀಟ್ ಮಾಡಿ, 'ನಾನು ಸತ್ಯವನ್ನು ಮಾತನಾಡುವ ಮೂಲಕ ಕೆಲವರ ಪಾಪಗಳನ್ನು ಬಹಿರಂಗಪಡಿಸಿದ್ದೇನೆ. ಬಹುಶಃ ಅದಕ್ಕಾಗಿಯೇ ನನ್ನನ್ನು ವಿಚಾರಣೆಗೆ ಕರೆದಿರಬಹುದು. ನಾನು ರೈತನ ಮಗ, ನಾನು ಗಾಬರಿಯಾಗುವುದಿಲ್ಲ. ನಾನು ಸತ್ಯದ ಪರವಾಗಿ ನಿಲ್ಲುತ್ತೇನೆ' ಎಂದಿದ್ದರು.

2018ರ ಆಗಸ್ಟ್ 23 ಮತ್ತು 2019ರ ಅಕ್ಟೋಬರ್ 30ರ ನಡುವೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಎರಡು ಕಡತಗಳನ್ನು ತೆರವುಗೊಳಿಸಲು ತನಗೆ 300 ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಲಾಗಿತ್ತು ಎಂದು ಮಲಿಕ್ ಹೇಳಿಕೊಂಡಿದ್ದರು.

ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌ಪಿಎಫ್‌ನ ಅದಕ್ಷತೆಯೇ ಕಾರಣ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನನಗೆ ತಿಳಿಸಿದ್ದರು ಎಂದು ಮಲಿಕ್ ಇತ್ತೀಚೆಗೆ ‘ದಿ ವೈ ರ್’ ಪೋರ್ಟಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು.

SCROLL FOR NEXT