ದೇಶ

ಶಾಲಾ ಆವರಣದಲ್ಲಿಯೇ 8ನೇ ತರಗತಿ ವಿದ್ಯಾರ್ಥಿಯ ಥಳಿಸಿ ಹತ್ಯೆ; ಮೃತದೇಹವನ್ನು ಚರಂಡಿಗೆ ಎಸೆದ ಹುಡುಗರು

Ramyashree GN

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ದೆಹಲಿಯ ಬದರ್‌ಪುರ ಪ್ರದೇಶದ ಎಂಸಿಡಿ ಸರ್ಕಾರಿ ಶಾಲೆಯ ಬಳಿ 8ನೇ ತರಗತಿಯ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಇಬ್ಬರು ಹುಡುಗರು ಶಾಲಾ ವಿದ್ಯಾರ್ಥಿಯಾಗಿರುವ ಮಗುವನ್ನು ಹೊಡೆದು ಶಾಲೆಯ ಬಳಿಯ ಚರಂಡಿಗೆ ಎಸೆದಿದ್ದಾರೆ ಎಂದು ಮಹಿಳೆಯೊಬ್ಬರು ರಾತ್ರಿ 8.20ಕ್ಕೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರಿಗೆ, ಚರಂಡಿಯಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಸುಮಾರು 12-13 ವರ್ಷದ ಬಾಲಕನ ಶವ ಪತ್ತೆಯಾಗಿದೆ.
ಮೃತ ಬಾಲಕನನ್ನು ಮೊಲರಬಂದ್ ಗ್ರಾಮದ ಬಿಲಾಸ್‌ಪುರ ಕ್ಯಾಂಪ್ ನಿವಾಸಿ ಸೌರಭ್ (12) ಎಂದು ಗುರುತಿಸಲಾಗಿದೆ. ಆತ ತಾಜ್‌ಪುರ ಪಹಾರಿ ಎಂಸಿಡಿ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಹವನ್ನು ಪರಿಶೀಲಿಸಿದಾಗ, ಮೊಂಡಾದ ವಸ್ತುವಿನಿಂದ ತಲೆಗೆ ಅನೇಕ ಗಾಯಗಳನ್ನು ಮಾಡಿರುವುದು ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಶಾಲಾ ಬ್ಯಾಗ್ ಮತ್ತು ದೇಹದ ಬಳಿ ನಾಲ್ಕರಿಂದ ಐದು ರಕ್ತಸಿಕ್ತ ಕಲ್ಲುಗಳು (ಇಟ್ಟಿಗೆಗಳು) ಇರುವುದು ಕಂಡುಬಂದಿದ್ದು, ಈ ಕಲ್ಲುಗಳನ್ನು ಅಪರಾಧದಕ್ಕೆ ಬಳಸಲಾಗಿದೆ ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ನಾವು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ಆಗ್ನೇಯ ಜಿಲ್ಲೆಯ ಅಪರಾಧ ತಂಡವು ಅಪರಾಧದ ಸ್ಥಳವನ್ನು ಪರಿಶೀಲಿಸಿದೆ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಘೋರ ಅಪರಾಧದ ಹಿಂದಿರುವ ದುಷ್ಕರ್ಮಿಗಳನ್ನು ಗುರುತಿಸಲು ಮತ್ತು ಅವರನ್ನು ಬಂಧಿಸಲು ಪೊಲೀಸ್ ತಂಡಗಳು ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿವೆ' ಎಂದು ಅಧಿಕಾರಿ ಹೇಳಿದರು.

ಮೃತ ದೇಹವನ್ನು ಏಮ್ಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

SCROLL FOR NEXT