ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಧ್ಯಂತರ ಶಿಫಾರಸುಗಳನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಬಿಂಬಿಸುವ ವೈರಲ್ ವೀಡಿಯೊ ವೈರಲ್ ಆದ ಬಳಿಕ ಸ್ವಾತಿ ಮಲಿವಾಲ್, ಜುಲೈ 23 ರಂದು ಹಿಂಸೆಯಿಂದ ನಲುಗಿರುವ ಮಣಿಪುರದ ಚುರಾಚಂದ್ಪುರ, ಮೊಯಿರಾಂಗ್, ಕಾಂಗ್ಪೋಕ್ಪಿ ಮತ್ತು ಇಂಫಾಲ್ ಜಿಲ್ಲೆಗಳನ್ನು ಒಳಗೊಂಡಂತೆ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು, ಮುಖ್ಯಮಂತ್ರಿ ರಾಜೀನಾಮೆ, ಪ್ರಧಾನಿ ಮತ್ತು ಕೇಂದ್ರ ಸಚಿವರ ತುರ್ತು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಸಮಗ್ರ ಕಾರ್ಯತಂತ್ರ ರೂಪಿಸುವುದು ಸೇರಿದಂತೆ 24 ಮಧ್ಯಂತರ ಶಿಫಾರಸುಗಳನ್ನು ಡಿಸಿಡಬ್ಲ್ಯು ರಾಷ್ಟ್ರಪತಿಗಳಿಗೆ ನೀಡಿದೆ. ಹೆಚ್ಚುವರಿಯಾಗಿ, ಜನಾಂಗೀಯ ಘರ್ಷಣೆಯ ಮೂಲ ಕಾರಣ ಮತ್ತು ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಸರ್ಕಾರದ ಕ್ರಮಗಳು ಮತ್ತು ಲೋಪಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ ರಚನೆಗೆ ಕರೆ ನೀಡಿದೆ.
ಎರಡು ಪ್ರತ್ಯೇಕ ಎಸ್ಐಟಿ ರಚನೆಗೆ ಶಿಫಾರಸು ಮಾಡಿರುವ ಆಯೋಗ, ಕೊಲೆಗಳು, ಕಾಣೆಯಾದ ವ್ಯಕ್ತಿಗಳು ಇತ್ಯಾದಿಗಳ ಎಲ್ಲಾ ಪ್ರಕರಣಗಳ ತನಿಖೆಯನ್ನು ಮೇಲ್ವಿಚಾರಣೆ ಮಾಡಲುಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಎಸ್ ಐಟಿ ಇರಬೇಕು ಮತ್ತು ನಿರ್ದಿಷ್ಟವಾಗಿ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಪರಿಶೀಲಿಸಲು ಮತ್ತೊಂದು ಎಸ್ ಐಟಿ ರಚನೆಯಾಗಬೇಕು, ಲೈಂಗಿಕ ದೌರ್ಜನ್ಯದ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಮತ್ತು ರಾಜ್ಯದ ಹೊರಗಿನ ತ್ವರಿತ ನ್ಯಾಯಾಲಯದಲ್ಲ್ಲಿ ಮೇಲಾಗಿ ದೆಹಲಿಯಲ್ಲಿ ವಿಚಾರಣೆಗಳನ್ನು ನಡೆಸಬೇಕು ಎಂದು ಡಿಸಿಡಬ್ಲ್ಯೂ ಹೇಳಿಕೆಯಲ್ಲಿ ತಿಳಿಸಿದೆ.