ಪ್ರಧಾನಿ ನರೇಂದ್ರ ಮೋದಿ 
ದೇಶ

ಅವಿಶ್ವಾಸ ನಿರ್ಣಯದ ವೇಳೆ ವಿಪಕ್ಷಗಳ ಸದಸ್ಯರು ಸದನದಿಂದ ದೂರ ಓಡಿಹೋದರು: ಪ್ರಧಾನಿ ನರೇಂದ್ರ ಮೋದಿ

ಅವಿಶ್ವಾಸ ನಿರ್ಣಯದ ವೇಳೆ ಸಂಸತ್ತಿನಿಂದ ಹೊರನಡೆದಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಶನಿವಾರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ ಹರಡುತ್ತಿರುವ ನಕಾರಾತ್ಮಕತೆಯನ್ನು ತಮ್ಮ ಸರ್ಕಾರ ಸೋಲಿಸಿದೆ ಎಂದು ಹೇಳಿದರು.

ಕೋಲಘಟ್ಟ: ಅವಿಶ್ವಾಸ ನಿರ್ಣಯದ ವೇಳೆ ಸಂಸತ್ತಿನಿಂದ ಹೊರನಡೆದಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಶನಿವಾರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ ಹರಡುತ್ತಿರುವ ನಕಾರಾತ್ಮಕತೆಯನ್ನು ತಮ್ಮ ಸರ್ಕಾರ ಸೋಲಿಸಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ರಾಜ್ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುಯಲ್ ಆಗಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ತಿಂಗಳು ನಡೆದ ಗ್ರಾಮೀಣ ಚುನಾವಣೆಯ ಸಂದರ್ಭದಲ್ಲಿ ಆಡಳಿತಾರೂಢ ಟಿಎಂಸಿ ರಾಜ್ಯದಲ್ಲಿ ಪ್ರತಿಪಕ್ಷಗಳನ್ನು ಬೆದರಿಸಲು 'ಭಯೋತ್ಪಾದನೆ ಮತ್ತು ಬೆದರಿಕೆಗಳನ್ನು' ಬಳಸಿತು ಎಂದು ಟೀಕಿಸಿದರು.

'ಎರಡು ದಿನಗಳ ಹಿಂದಷ್ಟೇ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ನಾವು ಸೋಲಿಸಿದ್ದೇವೆ. ಅವರು ಹರಡುತ್ತಿದ್ದ ನಕಾರಾತ್ಮಕತೆಯನ್ನು ನಾವು ಸೋಲಿಸಿದ್ದೇವೆ. ವಿರೋಧ ಪಕ್ಷಗಳು ತಮ್ಮ ಮೈತ್ರಿಯಲ್ಲಿನ ಬಿರುಕುಗಳು ಬಹಿರಂಗವಾಗಬಹುದು ಎಂದೇ ಮತ ಚಲಾಯಿಸಲು ಬಯಸಲಿಲ್ಲ. ಅವರು ಸದನದಿಂದ ದೂರ ಓಡಿಹೋದರು' ಎಂದು ಹೇಳಿದರು.

ಗುರುವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದ ನಂತರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಧ್ವನಿ ಮತದ ಮೂಲಕ ಸೋಲಿಸಲಾಯಿತು.

'ವಿರೋಧ ಪಕ್ಷಗಳು ಮಣಿಪುರದ ಬಗ್ಗೆ ಚರ್ಚೆಯನ್ನು ಬಯಸುವುದಿಲ್ಲ. ಅವರು ಯಾವುದೇ ಚರ್ಚೆಯ ಬಗ್ಗೆ ಗಂಭೀರವಾಗಿರಲಿಲ್ಲ. ಅವರು ಅದರ ಮೇಲೆ ರಾಜಕೀಯ ಮಾಡಲು ಬಯಸಿದ್ದರು' ಎಂದು ಅವರು ದೂರಿದರು.

ಕಾಂಗ್ರೆಸ್‌ನ ದಶಕದ ಹಳೆಯ ಘೋಷಣೆಯಾದ 'ಗರೀಬಿ ಹಟಾವೋ' (ಬಡತನ ನಿರ್ಮೂಲನೆ) ಉಲ್ಲೇಖಿಸಿದ ಪ್ರಧಾನಿ, 'ವಾಸ್ತವದಲ್ಲಿ, ಅವರು ಬಡತನವನ್ನು ತೊಡೆದುಹಾಕಲು ಮತ್ತು ದೇಶದ ಬಡ ಜನರ ಜೀವನ ಪರಿಸ್ಥಿತಿಗಳನ್ನು ಉನ್ನತೀಕರಿಸಲು ಏನನ್ನೂ ಮಾಡಿಲ್ಲ. ಬಿಜೆಪಿ ಸರ್ಕಾರವು ದೇಶದ ಬಡವರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.

ಗ್ರಾಮೀಣ ಚುನಾವಣೆಯ ಸಂದರ್ಭದಲ್ಲಿ ಆಡಳಿತಾರೂಢ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದನೆಯ ಆಳ್ವಿಕೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ ಪ್ರಧಾನಿ, ಇಂತಹ ಬೆದರಿಕೆಗಳ ಹೊರತಾಗಿಯೂ ಜನರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.

'ಬಂಗಾಳದಲ್ಲಿ ಪ್ರತಿಪಕ್ಷಗಳಿಗೆ ಬೆದರಿಕೆಯೊಡ್ಡುವ ಸಾಧನವಾಗಿ ಹಿಂಸಾಚಾರವನ್ನು ಬಳಸಲಾಗಿದೆ. ಆದರೆ, ಇದರ ಹೊರತಾಗಿಯೂ, ಬಂಗಾಳದ ಜನರ ಪ್ರೀತಿಯು ಗೆಲುವಿಗೆ ಕಾರಣವಾಗಿದೆ. ಆದರೆ, ನಮ್ಮ ಅಭ್ಯರ್ಥಿಗಳು ಗೆದ್ದಾಗ ಅವರಿಗೆ ಮೆರವಣಿಗೆ ನಡೆಸಲು ಅವಕಾಶ ನೀಡಲಿಲ್ಲ. ಕೆಲವರು ಮೆರವಣಿಗೆ ನಡೆಸಿದರೆ, ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇದು ಟಿಎಂಸಿ ರಾಜಕಾರಣ' ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT