ದೇಶ

ದೇಶದ ಜನರನ್ನು 'ಪರಿವಾರಜನ್' ಎನ್ನುವ ಮೂಲಕ ಸ್ವಾತಂತ್ರ್ಯೋತ್ಸವದ ಭಾಷಣ ಆರಂಭಿಸಿದ ಪ್ರಧಾನಿ

Ramyashree GN

ನವದೆಹಲಿ: 77ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜನರನ್ನು 'ನನ್ನ ಸಹ ನಾಗರಿಕರು' ಎಂದು ಸಂಬೋಧಿಸುವುದನ್ನು ಬಿಟ್ಟು, ತಮ್ಮ 'ಕುಟುಂಬ ಸದಸ್ಯರು' ಎಂದು ಸಂಬೋಧಿಸಿದರು.

'ನನ್ನ ಪ್ರೀತಿಯ 140 ಕೋಟಿ ಕುಟುಂಬ ಸದಸ್ಯರು' ಎನ್ನುವ ಮೂಲಕ 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಮೋದಿ ತಮ್ಮ ಕೊನೆಯ ಸ್ವಾತಂತ್ರ್ಯ ದಿನದ ಭಾಷಣವನ್ನು ಪ್ರಾರಂಭಿಸಿದರು.

ಭಾಷಣದುದ್ದಕ್ಕೂ ಅವರು ದೇಶದ ಜನರನ್ನು 'ಪರಿವಾರಜನ್‌' (ಕುಟುಂಬ ಸದಸ್ಯರು) ಎಂದು ಉಲ್ಲೇಖಿಸಿದರು.
ತಮ್ಮ ಹಿಂದಿನ ಭಾಷಣಗಳಲ್ಲಿ ಪ್ರಧಾನಿ ಮೋದಿಯವರು ದೇಶದ ಜನರನ್ನು 'ನನ್ನ ಪ್ರೀತಿಯ ಸಹೋದರ ಸಹೋದರಿಯರೇ' ಎಂದು ಉಲ್ಲೇಖಿಸುತ್ತಿದ್ದರು.

ಪ್ರಧಾನಿಯಾಗಿ ಸತತ 10ನೇ ಬಾರಿಗೆ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಈಗ ಯಾವುದೇ ಕ್ಷೇತ್ರದಲ್ಲೂ ಹಿಂದೆ ನಿಲ್ಲುವುದಿಲ್ಲ ಎಂದು ಜಾಗತಿಕ ತಜ್ಞರು ಹೇಳುತ್ತಿದ್ದಾರೆ. ಎಲ್ಲಾ ರೇಟಿಂಗ್ ಏಜೆನ್ಸಿಗಳು ದೇಶವನ್ನು ಶ್ಲಾಘಿಸುತ್ತವೆ ಎಂದು ಅವರು ಹೇಳಿದರು.

ಕೋವಿಡ್ ಮಹಾಮಾರಿಯ ಪ್ರಭಾವದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಯುದ್ಧವು ಮತ್ತೊಂದು ಭಿಕ್ಕಟ್ಟನ್ನು ಸೃಷ್ಟಿಸಿದೆ. ಹಣದುಬ್ಬರದ ಸಮಸ್ಯೆಯಿಂದ ಜಗತ್ತು ನಲುಗುತ್ತಿದೆ. ಹಣದುಬ್ಬರವು ಜಾಗತಿಕ ಆರ್ಥಿಕತೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದೆ ಎಂದು ಪ್ರಧಾನಿ ಹೇಳಿದರು.

ಭಾರತವು ಇತರ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವಾಗ, ದುರದೃಷ್ಟವಶಾತ್, ಹಣದುಬ್ಬರವನ್ನು ಕೂಡ ಆಮದು ಮಾಡಿಕೊಳ್ಳುತ್ತದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಕೆಲವಲ್ಲಿ ಯಶಸ್ಸನ್ನು ಸಾಧಿಸಲಾಗಿದೆ ಎಂದು ಹೇಳಿದರು.

ಆದರೆ, ನಮ್ಮ ದೇಶದ ಪರಿಸ್ಥಿತಿಯು ಜಗತ್ತಿನ ಇತರೆ ರಾಷ್ಟ್ರಗಳಿಗಿಂತ ಉತ್ತಮವಾಗಿದೆ ಎಂಬ ಕಾರಣದಿಂದ ನಾವು ತೃಪ್ತರಾಗಲು ಸಾಧ್ಯವಿಲ್ಲ. ನಮ್ಮ ಜನರ ಮೇಲಿನ ಬೆಲೆ ಏರಿಕೆ ಹೊರೆಯನ್ನು ಕಡಿಮೆ ಮಾಡಲು ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ನಾವು ಖಂಡಿತವಾಗಿಯೂ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಅವರು ಹೇಳಿದರು.

SCROLL FOR NEXT