ಕರ್ನೂಲು: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಚಿರತೆ ದಾಳಿಗೆ ಬಾಲಕಿ ಬಲಿಯಾದ ಬೆನ್ನಲ್ಲೇ ಇದೀಗ ಆಂಧ್ರ ಪ್ರದೇಶದ ಮತ್ತೊಂದು ಯಾತ್ರಾತಾಣ ಶ್ರೀಶೈಲಂನಲ್ಲೂ ಚಿರತೆ ಭೀತಿ ಎದುರಾಗಿದೆ.
ಮಂಗಳವಾರ ಶ್ರೀಶೈಲಂ ಹೊರವರ್ತುಲ ರಸ್ತೆಯ ಬಳಿ ಮುಖ್ಯ ದೇವಾಲಯದ ಸಮೀಪವಿರುವ ಕಾಟೇಜ್ಗಳ ಆವರಣದಲ್ಲಿ ಚಿರತೆ ಕಾಣಿಸಿಕೊಂಡ ನಂತರ ಜನರಲ್ಲಿ ಭೀತಿ ಆವರಿಸಿದೆ. ಈ ಹಿಂದೆ ದೇವಾಲಯದ ಬಳಿ ಆಹಾರಕ್ಕಾಗಿ ತಿರುಗುತ್ತಿರುವ ಕರಡಿ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಜೀವಭಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತಿರುಮಲ: ಚಿರತೆ ದಾಳಿಗೆ ಬಾಲಕಿ ಸಾವು; ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯ ಬದಲು, TTD ನೂತನ ವೇಳಾಪಟ್ಟಿ
ಕೇವಲ 2 ದಿನಗಳ ಅಂತರದಲ್ಲಿ ಶ್ರೀಶೈಲಂನಲ್ಲಿ ಕರಣಿ ಮತ್ತು ಚಿರತೆ ಕಾಣಿಸಿಕೊಂಡಿದ್ದು, ಭಕ್ತರು ಚಿರತೆಯ ಚಲನವಲನವನ್ನು ತಮ್ಮ ಫೋನ್ಗಳಲ್ಲಿ ಸೆರೆಹಿಡಿದ ನಂತರ ಚಿರತೆಯ ಚಿತ್ರಗಳು ವೈರಲ್ ಆಗಿವೆ. ಚಿರತೆ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡು ಕಾರ್ಯಾಚರಣೆ ನಡೆಸಿದ್ದಾರೆ.
ಸುಮಾರು ಐದು ಚಿರತೆಗಳು ರಿಂಗ್ ರಸ್ತೆ ಮತ್ತು ಸುತ್ತಮುತ್ತ ನುಗ್ಗಿವೆ ಎಂದು ತಿಳಿದುಬಂದಿದೆ. ಅರಣ್ಯ ವಲಯದಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಭಕ್ತರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ಭಕ್ತರು ಹಾಗೂ ಸ್ಥಳೀಯರು ಅರಣ್ಯ ಪ್ರದೇಶಗಳಿಗೆ ತೆರಳ ಬೇಡಿ ಎಂದು ಶ್ರೀಶೈಲಂ ಅರಣ್ಯ ವಿಭಾಗದ ಅಧಿಕಾರಿ ವಿ.ನರಸಿಂಹುಲು ತಿಳಿಸಿದ್ದಾರೆ.