ದೇಶ

ಮಹಾರಾಷ್ಟ್ರ: ಕಳ್ಳತನದ ಶಂಕೆ ಮೇಲೆ ನಾಲ್ವರು ದಲಿತ ಬಾಲಕರನ್ನು ಮರಕ್ಕೆ ನೇತುಹಾಕಿ ಥಳಿತ

Lingaraj Badiger

ಮುಂಬೈ: ಮೇಕೆಗಳನ್ನು ಮತ್ತು ಪಾರಿವಾಳಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ನಾಲ್ವರು ದಲಿತ ಬಾಲಕರನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಥಳಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶ್ರೀರಾಂಪುರದಲ್ಲಿ ನಡೆದಿದೆ.

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶ್ರೀರಾಮಪುರ ತಹಸಿಲ್‌ನ ಹರೇಗಾಂವ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಈ ಕುರಿತು ತನಿಖೆ ನಡೆಸಬೇಕ ಎಂದು ಒತ್ತಾಯಿಸಿರುವ ವಂಚಿತ್ ಬಹುಜನ ಅಘಾಡಿ(ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು, ಸಂತ್ರಸ್ತ ಓರ್ವ ಬಾಲಕನೊಂದಿಗೆ ಮತ್ತು ಅವರ ಅಜ್ಜಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಬಾಲಕ ತನ್ನ ಮೇಲೆ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಲಾಗಿದೆ ಮತ್ತು ಉಗುಳಲಾಗಿದೆ, ವಿವಸ್ತ್ರಗೊಳಿಸಿ, ತಲೆಕೆಳಗಾಗಿ ನೇತುಹಾಕಲಾಯಿತು ಎಂದು ಹೇಳಿರುವುದಾಗಿ ಪ್ರಕಾಶ್ ಅಂಬೇಡ್ಕರ್ ಅವರು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ಅಂಬೇಡ್ಕರ್ ಅವರು ತಮ್ಮ ಟ್ವೀಟ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT