ದೇಶ

ದೇಶವನ್ನು ಜಾತಿ ಹೆಸರಿನಲ್ಲಿ ವಿಭಜಿಸುವ ಯತ್ನ: ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಂತರ ಪ್ರಧಾನಿ ಮೋದಿ

Nagaraja AB

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ಮೂರರಲ್ಲಿ ಬಿಜೆಪಿಯ ಐತಿಹಾಸಿಕ ಹಾಗೂ ಅಭೂತಪೂರ್ವ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಶ್ಲಾಘಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಎದುರಾಳಿಯಿಂದ ಕಸಿದುಕೊಂಡಿದ್ದು, ಕಾಂಗ್ರೆಸ್ ಗೆ ಸೋಲಾಗಿದೆ. 

ಬಿಜೆಪಿ ಸಂಭ್ರಮಾಚರಣೆ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಇಂದಿನ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ.  ಇಂದು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಭಾವನೆ ಗೆದ್ದಿದೆ. 'ಅಭಿವೃದ್ಧಿ ಹೊಂದಿದ ಭಾರತ' ಎಂಬ ಕರೆಗೆ ಜಯ ಸಿಕ್ಕಿದೆ. ಆತ್ಮನಿರ್ಭರ್ ಭಾರತದ ಸಂಕಲ್ಪ ಗೆದ್ದಿದೆ. ತುಳಿತಕ್ಕೊಳಗಾದವರು ಗೆದ್ದಿದ್ದಾರೆ. ಪ್ರಾಮಾಣಿಕತೆ ಮತ್ತು ಉತ್ತಮ ಆಡಳಿತ ಗೆದ್ದಿದೆ ಎಂದು ಪ್ರಧಾನಿ ಘೋಷಿಸಿದರು.

ದೇಶವನ್ನು ಜಾತಿ ಹೆಸರಿನಲ್ಲಿ ವಿಭಜಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ಮಹಿಳೆಯರು, ಯುವಕರು, ಬಡವರು ಮತ್ತು ರೈತರು ನಾಲ್ಕು ದೊಡ್ಡ ಜಾತಿಗಳಾಗಿದ್ದು, ಅವರ ಸಬಲೀಕರಣವು ದೇಶದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು ಪುನರುಚ್ಚರಿಸಿದರು.

ಫಲಿತಾಂಶದ ಧ್ವನಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಕ್ಕೆ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತ ಕೇಳಿಬರುತ್ತದೆ. ಭ್ರಷ್ಟಾಚಾರ, ತುಷ್ಟೀಕರಣ ಮತ್ತು ಕುಟುಂಬವಾದದ ವಿರುದ್ಧದ ಅಸಮಾಧಾನವನ್ನು ಇಂದಿನ ಜನಾದೇಶ ಸಾಬೀತುಪಡಿಸಿದೆ. ಈ ಮೂರು ಅನಿಷ್ಟಗಳನ್ನು ತೊಡೆದುಹಾಕಲು ಯಾರಾದರೂ ಪರಿಣಾಮಕಾರಿಯಾಗಿದ್ದರೆ ಅದು ಬಿಜೆಪಿ ಮಾತ್ರ ಎಂದು ದೇಶ ಭಾವಿಸುತ್ತದೆ ಎಂದರು. 

ದೇಶವನ್ನು ದುರ್ಬಲಗೊಳಿಸುವ ರಾಷ್ಟ್ರವಿರೋಧಿ ಅಂಶಗಳನ್ನು ಮತ್ತು ಆಲೋಚನೆಗಳನ್ನು ಬಲಪಡಿಸುವ ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ನನ್ನ ಸಲಹೆಯಾಗಿದೆ ಎಂದು ಅವರು ತಿಳಿಸಿದರು. 

ದೇಶದಲ್ಲಿ ಬಿಜೆಪಿಯ ಕೇಂದ್ರ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರದ ವಿರುದ್ಧದ ಅಭಿಯಾನಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಭ್ರಷ್ಟರ ಜೊತೆ ನಿಲ್ಲುವ ಕಿಂಚಿತ್ತೂ ನಾಚಿಕೆಪಡದವರಿಗೆ ದೇಶದ ಜನತೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಾರ್ವಜನಿಕ ಬೆಂಬಲ ಎಂಬುದನ್ನು ತನಿಖಾ ಸಂಸ್ಥೆಗಳ ಮಾನಹಾನಿ ಮಾಡಲು ಹಗಲಿರುಳು ಶ್ರಮಿಸುತ್ತಿರುವವರು ಈ ಚುನಾವಣಾ ಫಲಿತಾಂಶವನ್ನು  ಅರ್ಥಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

SCROLL FOR NEXT