ಜೈಪುರ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡು ಒಂದು ವಾರ ಕಳೆದಿದ್ದು, ಬಿಜೆಪಿ ಇಂದು ಛತ್ತೀಸ್ ಗಢ ಸಿಎಂ ಆಯ್ಕೆ ಮಾಡಿದೆ. ಆದರೆ ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಸಿಎಂ ಆಯ್ಕೆ ಕಗ್ಗಂಟಾಗಿದೆ.
ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಅವರ ಹೆಸರು ಸಿಎಂ ಹುದ್ದೆಗೆ ಮುಂಚೂಣಿಯಲ್ಲಿದೆ. ಈ ನಡುವೆ 10 ಶಾಸಕರು ವಸುಂಧರಾ ರಾಜೆ ಅವರನ್ನು ಭೇಟಿ ಮಾಡಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಸಭೆಯನ್ನು ಇನ್ನಷ್ಟೇ ನಡೆಸಬೇಕಿದ್ದು, ಸಭೆಯಲ್ಲಿ ಸಿಎಂ ಆಯ್ಕೆ ನಡೆಯಲಿದೆ.
ಅಜಯ್ ಸಿಂಗ್, ಬಾಬು ಸಿಂಗ್ ಸೇರಿದಂತೆ ಹಲವರು ರಾಜೆ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ವಸುಂಧರಾ ರಾಜೆ ಈಗಾಗಲೇ 2 ಬಾರಿ ರಾಜಸ್ಥಾನ ಸಿಎಂ ಆಗಿದ್ದಾರೆ.
ರಾಜಸ್ಥಾನ ಬಿಜೆಪಿ ಶಾಸಕರು- ವಸುಂಧರಾ ರಾಜೆ ಭೇಟಿಯನ್ನು ಶಕ್ತಿ ಪ್ರದರ್ಶನದ ಭಾಗವೆಂದೇ ವಿಶ್ಲೇಷಿಸಲಾಗುತ್ತಿದೆ. ವಸುಂಧರಾ ರಾಜೆ ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಸಿಎಂ ಆಯ್ಕೆ ಸಂಬಂಧ ರಾಜಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಈಗಾಗಲೇ ವೀಕ್ಷಕರನ್ನು ಕಳಿಸಿದೆ.