ಕೊಚ್ಚಿನ್: ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಸಿಎಂ ಪಿಣರಾಯಿ ವಿಜಯನ್ ಸಂಚು ರೂಪಿಸಿದ್ದಾರೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಸದಸ್ಯರು ತಮ್ಮ ಮೇಲೆ ಕಪ್ಪು ಬಾವುಟ ಪ್ರದರ್ಶಿಸಿ ತೀವ್ರ ಪ್ರತಿಭಟನೆ ಮಾಡಿದ್ದ ಪ್ರಕರಣವನ್ನು ಪೂರ್ವ ನಿಯೋಜಿತ ಕೃತ್ಯ ಎಂದು ಕರೆದಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ವಿದ್ಯಾರ್ಥಿ ಸಂಘಟನೆಗಳ ಸೋಗಿನಲ್ಲಿರುವ ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಶ್ವವಿದ್ಯಾನಿಲಯದ ಸೆನೆಟ್ಗಳನ್ನು "ಸಂಘ ಪರಿವಾರದ ವ್ಯಕ್ತಿಗಳಿಂದ" ತುಂಬಿದ್ದಾರೆ ಎಂದು ಆರೋಪಿಸಿ SFI ಸದಸ್ಯರು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ಅವರ ಕಾರಿಗೆ ಮುತ್ತಿಗೆ ಹಾಕಿದ್ದರು. ಸೋಮವಾರ ರಾಜ್ಯಪಾಲ ಖಾನ್ ಅವರು ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ, ಎಸ್ಎಫ್ಐ ಸದಸ್ಯರ ಗುಂಪು ಅವರಿಗೆ ಕಪ್ಪು ಬಾವುಟ ತೋರಿಸಿ, ಅವರ ಕಾರಿನ ಹತ್ತಿರ ಹೋಗಿ ಘೋಷಣೆಗಳನ್ನು ಕೂಗಿತು.
ಇದನ್ನೂ ಓದಿ: ಮಸೂದೆ ಅಂಗೀಕಾರಕ್ಕೆ ವಿಳಂಬ: ಪಂಜಾಬ್ ರಾಜ್ಯಪಾಲರ ಕೇಸಿನ ತೀರ್ಪು ನೋಡುವಂತೆ ಕೇರಳ ರಾಜ್ಯಪಾಲಗೆ 'ಸುಪ್ರೀಂ' ಸೂಚನೆ!
ಈ ಪ್ರತಿಭಟನೆಯಿಂದ ಕೆರಳಿದ ಖಾನ್, ತಮ್ಮ ಕಾರಿಂದ ಕೆಳಗಿಳಿದು ಪ್ರತಿಭಟನಾಕಾರರ ಕಡೆಗೆ ನಡೆದು, "ರಕ್ತಪಾತಿಗಳೇ, ಬನ್ನಿ" ಎಂದು ಹೇಳಿದರು. ನಂತರ, ಪೊಲೀಸರ ಕಡೆಗೆ ತಿರುಗಿದ ಖಾನ್, “ಅವರು ನನ್ನ ಹತ್ತಿರ ಹೇಗೆ ಬಂದರು? ಇಲ್ಲಿ ಪೊಲೀಸ್ ಅಧಿಕಾರಿ ಯಾರು? ಅವರು (ಪ್ರತಿಭಟನಕಾರರು) ನನ್ನ ಕಾರಿಗೆ ಹೊಡೆಯುವ ಕ್ರಿಮಿನಲ್ಗಳು,'' ಎಂದು ಅವರು ಹೇಳಿದರು.
ಇದೇ ವೇಳೆ ಘಟನೆಗೆ ಸಿಎಂ ಪಿಣರಾಯಿ ವಿಜಯನ್ ಅವರನ್ನುದೂಷಿಸಿದ ರಾಜ್ಯಪಾಲರು, “...ನಾನು ಕೆಳಗೆ ಇಳಿದಾಗ ಪೊಲೀಸರು ಅವರನ್ನು ಕಾರಿನಲ್ಲಿ ಕಳುಹಿಸಿದರು ಮತ್ತು ಅವರು ಓಡಿಹೋದರು. ಸಿಎಂ ನಿರ್ದೇಶನ ಮಾಡುತ್ತಿರುವಾಗ ದರಿದ್ರ ಪೊಲೀಸರು ಏನು ಮಾಡಲು ಸಾಧ್ಯ. ಸಿಎಂ ಪಿತೂರಿ ಮಾಡುತ್ತಿದ್ದಾರೆ. ಅವರು ನನ್ನನ್ನು ದೈಹಿಕವಾಗಿ ನೋಯಿಸಲು ಈ ಜನರನ್ನು ಕಳುಹಿಸುತ್ತಿದ್ದಾರೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ... ನನ್ನನ್ನು ದೈಹಿಕವಾಗಿ ನೋಯಿಸಲು ಪಿತೂರಿ ಮಾಡುವುದು ಮುಖ್ಯಮಂತ್ರಿಯ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.