ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಸಂಜಯ್ ಸಿಂಗ್ ನ್ಯಾಯಾಂಗ ಬಂಧನ ಜ. 10ರವರೆಗೆ ವಿಸ್ತರಣೆ

Ramyashree GN

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಎಎಪಿ ಹಿರಿಯ ನಾಯಕ ಸಂಜಯ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ಜನವರಿ 10ರವರೆಗೆ ದೆಹಲಿ ನ್ಯಾಯಾಲಯ ಗುರುವಾರ ವಿಸ್ತರಿಸಿದೆ.

ವಿಶೇಷ ನ್ಯಾಯಾಧೀಶ ಎಂಕೆ ನಾಗ್‌ಪಾಲ್ ಅವರು ಆಪಾದಿತ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ಯಸಭಾ ಸಂಸದ ಸಿಂಗ್ ಅವರಿಗೆ ಐದನೇ ಪೂರಕ ಚಾರ್ಜ್ ಶೀಟ್ ಮತ್ತು ಇತರ ಸಂಬಂಧಿತ ದಾಖಲೆಗಳ ಪ್ರತಿಯನ್ನು ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದರು.

ವಿಚಾರಣೆಯ ಸಮಯದಲ್ಲಿ, ಜಾರಿ ನಿರ್ದೇಶನಾಲಯದ ಪರ ವಕೀಲರು ಸಿಂಗ್ ಅವರಿಗೆ ಹಿಂದಿನ ಪ್ರಾಸಿಕ್ಯೂಷನ್ ದೂರುಗಳು ಮತ್ತು ಇತರ ಕೆಲವು ದಾಖಲೆಗಳನ್ನು ನೀಡಲು ಸಮಯವನ್ನು ಕೋರಿದರು.

'ಆಲ್ಫಾ' ಎಂಬ ಗುಪ್ತನಾಮದಿಂದ ಸಂರಕ್ಷಿತ ಸಾಕ್ಷಿಯನ್ನು ಉಲ್ಲೇಖಿಸಿರುವ ಪೂರಕ ದೂರಿನ ಇ-ಪ್ರತಿಯನ್ನು ಈಗಾಗಲೇ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಎಪಿ ನಾಯಕ ಸಂಜಯ್ ಸಿಂಗ್ ಅವರಿಗೆ ಒದಗಿಸಲಾಗಿದೆ ಎಂದು ವಕೀಲರು ಹೇಳಿದರು.

ಡಿಸೆಂಬರ್ 23 ರೊಳಗೆ ಆರೋಪಿ ಪರ ವಕೀಲರಿಗೆ ಹಿಂದಿನ ಎಲ್ಲಾ ಆರೋಪಪಟ್ಟಿಗಳು, ಸಂಬಂಧಿತ ದಾಖಲೆಗಳು, ಐದನೇ ಪ್ರಾಸಿಕ್ಯೂಷನ್ ದೂರು ಮತ್ತು ಸಕ್ಷಮ ಪ್ರಾಧಿಕಾರದ ಬಾಕಿ ಇರುವ ಆದೇಶಗಳ ಪ್ರತಿಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಈ ಮಾಹಿತಿಯನ್ನು ಗುಪ್ತನಾಮವನ್ನು ಬಳಸಿಕೊಂಡು ಹಂಚಿಕೊಳ್ಳಬೇಕು ಎಂದಿದೆ.

'ಪ್ರಕರಣವನ್ನು ವಿಚಾರಣೆಯನ್ನೂ ಮುಂದೂಡಿದ ನ್ಯಾಯಾಲಯ, ನ್ಯಾಯಾಂಗ ಬಂಧನದ ಅವಧಿಯನ್ನು ಜನವರಿ 10 ರವರೆಗೆ ವಿಸ್ತರಿಸಿದೆ. 

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 4 ರಂದು ಸಿಂಗ್ ಇ.ಡಿ ಅವರನ್ನು ಬಂಧಿಸಿತ್ತು.

SCROLL FOR NEXT