ದೇಶ

ನವದೆಹಲಿ: ಡ್ರಗ್ಸ್ ಖರೀದಿಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕೊಂದ ಪುತ್ರ, ಬಂಧನ

Nagaraja AB

ನವದೆಹಲಿ: ಡ್ರಗ್ಸ್ ಖರೀದಿಗೆ ಹಣ ಕೊಡಲಿಲ್ಲವೆಂದು ತನ್ನ ತಂದೆಯನ್ನೇ ಕೊಂದ ಪುತ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  ಮೃತರನ್ನು ಶಕುರ್‌ಪುರ ಗ್ರಾಮದ ನಿವಾಸಿ ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ವಾಯುವ್ಯ ದೆಹಲಿಯ ಸುಭಾಷ್ ಪ್ಲೇಸ್‌ನಲ್ಲಿ ಜಗಳ ನಡೆದಿರುವ ಬಗ್ಗೆ ಮಾಹಿತಿ ದೊರೆತ ನಂತರ ಪೊಲೀಸರು ಅಲ್ಲಿಗೆ ಧಾವಿಸಿದಾಗ ಸುರೇಶ್ ಗಾಯಗೊಂಡಿರುವುದು ತಿಳಿದುಬಂದಿದೆ. ಗಾಯದ ನೋವಿನಿಂದ ಬಳುತ್ತಿದ್ದ ಅವರ ಒಂದು ಕಿವಿಯಿಂದ ರಕ್ತ ಸ್ರಾವವಾಗುತ್ತಿತ್ತು. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ  ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಮೃತ ವ್ಯಕ್ತಿ ತನ್ನ ಮಗ ಅಜಯ್ ಜೊತೆಗೆ ಹಣದ ವಿಚಾರವಾಗಿ ಜಗಳವಾಡಿರುವುದು ತಿಳಿದುಬಂದಿದೆ. ವಾಗ್ವಾದ ತಾರಕಕ್ಕೇರಿದಾಗ ಡ್ರಗ್ಸ್ ಖರೀದಿಸಲು ಹಣ ನೀಡಲು ನಿರಾಕರಿಸಿದ ತಂದೆ ಮೇಲೆ ಅಜಯ್ ಹಲ್ಲೆ ನಡೆಸಿದ್ದಾನೆ ಎಂದು ಅವರು ಹೇಳಿದರು.

ಆರೋಪಿ ಅಜಯ್ ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಎಂದು ಡಿಸಿಪಿ ತಿಳಿಸಿದ್ದಾರೆ. 

SCROLL FOR NEXT