ದೇಶ

ಬಿಜೆಪಿ ಕಾಶ್ಮೀರವನ್ನು ಅಫ್ಘಾನಿಸ್ತಾನವನ್ನಾಗಿ ಮಾಡಿದೆ: ಮೆಹಬೂಬಾ ಮುಫ್ತಿ

Lingaraj Badiger

ನವದೆಹಲಿ: ಬಿಜೆಪಿ ಜಮ್ಮು ಮತ್ತು ಕಾಶ್ಮೀರವನ್ನು ಅಫ್ಘಾನಿಸ್ತಾನವನ್ನಾಗಿ ಪರಿವರ್ತಿಸಿದೆ. ಬಿಜೆಪಿ ಸರ್ಕಾರ ಅತಿಕ್ರಮಣ ವಿರೋಧಿ ಅಭಿಯಾನದ ಅಡಿಯಲ್ಲಿ ಬಡವರು ಮತ್ತು ಅಂಚಿನಲ್ಲಿರುವವರ ಮನೆಗಳನ್ನು ಬುಲ್ಡೋಜರ್‌ಗಳನ್ನು ಬಳಸಿ ನೆಲಸಮ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೋಮವಾರ ಆರೋಪಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ, "ಬಿಜೆಪಿ ನಡೆಸುತ್ತಿರುವ ದೌರ್ಜನ್ಯಗಳಿಗೆ" ಮೂಕ ಪ್ರೇಕ್ಷಕರಾಗಬೇಡಿ ಎಂದು ದೇಶದ ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಿದರು. ಬಿಜೆಪಿ ತನ್ನ ಬಹುಮತವನ್ನೇ ಅಸ್ತ್ರವಾಗಿ ಬಳಸಿಕೊಂಡು ಸಂವಿಧಾನವನ್ನು ಬುಲ್ಡೋಜ್ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

"ಪ್ಯಾಲೆಸ್ತೀನ್ ಇನ್ನೂ ಉತ್ತಮವಾಗಿದೆ. ಅಲ್ಲಿ ಕನಿಷ್ಠಪಕ್ಷ ಜನ ಮಾತನಾಡುತ್ತಿದ್ದಾರೆ. ಆದರೆ ಇಲ್ಲಿ ಜನರ ಮನೆಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುತ್ತಿರುವ ರೀತಿ ನೋಡಿದರೆ ಕಾಶ್ಮೀರದ ಸ್ಥಿತಿ ಅಫ್ಘಾನಿಸ್ತಾನಕ್ಕಿಂತ ಕೆಟ್ಟದಾಗುತ್ತಿದೆ" ಎಂದಿದ್ದಾರೆ.

ಸರ್ಕಾರದ ಪ್ರಕಾರ ಶತಮಾನಗಳಷ್ಟು ಹಳೆಯದಾದ ಶಂಕರಾಚಾರ್ಯ ದೇವಸ್ಥಾನ ಮತ್ತು ಹಿಂದಿನ ಮಹಾರಾಜರು ನಿರ್ಮಿಸಿದ ಕಂಟೋನ್ಮೆಂಟ್ ಕೂಡ ಅತಿಕ್ರಮಣ ಭೂಮಿಯಲ್ಲಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದರು.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಬಡವರ ಮನೆಗಳನ್ನು ಮುಟ್ಟುವುದಿಲ್ಲ ಎಂದು ಹೇಳಬಹುದು. ಆದರೆ ಅವರ ಸಂದೇಶ ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ. ಏಕೆಂದರೆ ಟಿನ್ ಶೆಡ್‌ಗಳನ್ನು ಹೊಂದಿರುವ ವಸತಿಗಳನ್ನು ಸಹ ಕೆಡವಲಾಗುತ್ತಿದೆ ಎಂದು ಪಿಡಿಪಿ ನಾಯಕಿ ಆರೋಪಿಸಿದ್ದಾರೆ.

SCROLL FOR NEXT