ದೇಶ

ಕಾರಿನಲ್ಲಿ ಇಬ್ಬರು ಸಜೀವ ದಹನ: ಕೃತ್ಯದ ಹಿಂದೆ ಭಜರಂಗದಳದ ಕೈವಾಡ, ಆರೋಪ ನಿರಾಕರಿಸಿದ ಆರೋಪಿಗಳು

Nagaraja AB

ಬಿವಾನಿ: ರಾಜಸ್ಥಾನದ ಭಾರತ್ ಪುರ ಜಿಲ್ಲೆಯಿಂದ ಅಪಹರಿಸಲಾದ ಇಬ್ಬರು ವ್ಯಕ್ತಿಗಳು ಹರಿಯಾಣದ ಬಿವಾನಿ ಜಿಲ್ಲೆಯಲ್ಲಿ ಕಾರೊಂದರಲ್ಲಿ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಭಜರಂಗದಳ ಕಾರ್ಯಕರ್ತರು ಮೃತರನ್ನು ಅಪಹರಿಸಿದ್ದಾಗಿ ಅವರ ಕುಟುಂಬಸ್ಥರು ಹೇಳಿದ್ದಾರೆ. ಆದರೆ,  ಗೋ ಹತ್ಯೆಗಾಗಿ ಈ ಘಟನೆ ನಡೆದಿರಬಹುದೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮೃತರನ್ನು ನಾಸಿರ್ (22) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂದು ಗುರುತಿಸಲಾಗಿದೆ. ರಾಜಸ್ಥಾನ ಮೂಲದ ಇವರನ್ನು ಬುಧವಾರ ಅಪಹರಿಸಲಾಗಿತ್ತು. ಕಾರಿನಲ್ಲಿ ಸುಟ್ಟು ಕರಕಲಾದ ಮೃತದೇಹಗಳು ಗುರುವಾರ ಬೆಳಗ್ಗೆ ಬಿವಾನಿಯ ಲೊಹಾರು ಬಳಿ ಪತ್ತೆಯಾಗಿದ್ದವು.

ಮೃತರ ಸಂಬಂಧಿಕರು ನೀಡಿರುವ ದೂರಿನ ಆಧಾರದ ಮೇಲೆ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ತಂಡವೊಂದನ್ನು ರಚಿಸಲಾಗಿದೆ ಎಂದು ಭರತ್ ಪುರ ಎಸ್ ಪಿ ಶ್ಯಾಮ್ ಸಿಂಗ್ ಹೇಳಿದ್ದಾರೆ. ಈ ಮಧ್ಯೆ ಹೀನಕೃತ್ಯ ಹಿಂದೆ ಭಜರಂಗದಳ ಕೈವಾಡವಿದೆ ಎಂಬುದನ್ನು ಆರೋಪಿಗಳು ಅಲ್ಲಗಳೆದಿದ್ದಾರೆ.

ನಮ್ಮ ತಂಡ ಈ ಕೃತ್ಯವೆಸಗಿಲ್ಲ. ಪೊಲೀಸರು ತನಿಖೆ ನಡೆಸಿ, ನಿಜವಾದ ಆರೋಪಿಗಳನ್ನು ಪತ್ತೆ ಮಾಡಲಿ, ನಮ್ಮ ಸಂಘಟನೆಯ ವರ್ಚಸ್ಸು ಕುಂದಿಸಲು  ಈ ರೀತಿ ಎಳೆದು ತರಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ಆರೋಪಿಗಳಲ್ಲಿ ಒಬ್ಬನಾದ ಮೊನು ಮಾನೆಸರ್ ಹೇಳಿದ್ದಾರೆ. 
 

SCROLL FOR NEXT