ದೇಶ

ಉತ್ತರ ಪ್ರದೇಶ: ಭಾರತ್ ಜೋಡೋ ಯಾತ್ರೆಗೆ ಅಖಿಲೇಶ್ ಯಾದವ್, ಮಾಯಾವತಿ, ಜಯಂತ್ ಚೌಧರಿ ಗೈರು

Ramyashree GN

ಬಾಗ್‌ಪತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಪ್ರವೇಶಿಸಿ ಒಂದು ದಿನದ ನಂತರವೂ, ಯಾವುದೇ ಪ್ರಮುಖ ವಿರೋಧ ಪಕ್ಷದ ನಾಯಕರು ಯಾತ್ರೆಯಲ್ಲಿ ಹೆಜ್ಜೆ ಹಾಕಲು ಬಂದಿಲ್ಲ.

ಪ್ರಮುಖ ನಾಯಕರನ್ನು ಹೊರತುಪಡಿಸಿ ಯಾತ್ರೆಗೆ ಜನಸಾಗರವೇ ಹರಿದು ಬರುತ್ತಿದೆಯಾದರೂ, ಆಮಂತ್ರಣ ನೀಡಿದರೂ ಈವರೆಗೆ ಯಾವುದೇ ವಿರೋಧ ಪಕ್ಷದ ನಾಯಕರು ಭಾರತ್ ಜೋಡೋ ಯಾತ್ರೆಗೆ ಸೇರಿಕೊಂಡಿಲ್ಲ.

ಪಶ್ಚಿಮ ಉತ್ತರ ಪ್ರದೇಶವು ರೈತರ ಪ್ರತಿಭಟನೆಯ ಕೇಂದ್ರಬಿಂದು ಮತ್ತು ಪ್ರೇರಕ ಶಕ್ತಿಯಾಗಿತ್ತು. ಆದರೆ, ಆದರೆ ರೈತ ಮುಖಂಡರು ಕೂಡ ಯಾತ್ರೆಯಿಂದ ಹೊರಗುಳಿದಿದ್ದಾರೆ. ರಾಕೇಶ್ ಟಿಕಾಯತ್ ಅಥವಾ ರೈತ ಸಂಘದ ಯಾವುದೇ ಪ್ರತಿನಿಧಿ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಈ ಬೆನ್ನಲ್ಲೇ, ಯಾತ್ರೆಯು ಅಪಾರ ಜನಸ್ತೋಮವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಒಗ್ಗಟ್ಟಿನ ಸಂದೇಶವನ್ನು ಸಾರುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ಯಾತ್ರೆಗೆ ಸೇರುವಂತೆ ಅಖಿಲೇಶ್ ಯಾದವ್, ಮಾಯಾವತಿ ಮತ್ತು ಆರ್‌ಎಲ್‌ಡಿಯ ಜಯಂತ್ ಅವರನ್ನು ಕಾಂಗ್ರೆಸ್ ಆಹ್ವಾನಿಸಿತ್ತು. ಎಲ್ಲಾ ನಾಯಕರು ರಾಹುಲ್ ಗಾಂಧಿಗೆ ಶುಭ ಹಾರೈಸಿದ್ದಾರೆ. ಆದರೆ, ಯಾತ್ರೆಗೆ ಈವರೆಗೆ ಸೇರಿಲ್ಲ.

ಭಾರತ್ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶವನ್ನು ಪ್ರವೇಶಿಸಿತು. ಉತ್ತರ ಪ್ರದೇಶದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲೋನಿ ಗಡಿಯಲ್ಲಿ ಯಾತ್ರೆಯನ್ನು ಸ್ವಾಗತಿಸಿದರು ಮತ್ತು ಅವರ ಸೋದರ ರಾಹುಲ್ ಗಾಂಧಿಯನ್ನು 'ಯೋಧ' ಎಂದು ಕರೆದರು.

ಭಾರತ್ ಜೋಡೋ ಯಾತ್ರೆಗೆ ಸ್ವಾಗತ ಕೋರಿ ಮಾತನಾಡಿದ ಅವರು, 'ನನ್ನ ಅಣ್ಣನನ್ನು ನೋಡಿ ನಾನು ಗರಿಷ್ಠ ಹೆಮ್ಮೆಪಡುತ್ತೇನೆ. ಏಕೆಂದರೆ, ಆಡಳಿತದಲ್ಲಿರುವ ಸರ್ಕಾರವು ತನ್ನ ಎಲ್ಲಾ ಒತ್ತಡವನ್ನು ಹಾಕಿತು. ಆತನ ಇಮೇಜ್ ಅನ್ನು ನಾಶಮಾಡಲು ಸಾವಿರಾರು ಕೋಟಿಗಳನ್ನು ಖರ್ಚು ಮಾಡಿದೆ. ಆದರೆ, ರಾಹುಲ್ ಗಾಂಧಿ ಸತ್ಯದ ಹಾದಿಯಿಂದಾಗಿ ಯಾವುದಕ್ಕೂ ಹಿಂಜರಿಯಲಿಲ್ಲ. ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ಆದರೆ, ಆತ ಯೋಧನಾಗಿರುವುದರಿಂದ ಭಯಪಡಲಿಲ್ಲ' ಎಂದು ಅವರು ಇಲ್ಲಿನ ಲೋನಿ ಗಡಿಯಲ್ಲಿ ಹೇಳಿದರು.

'ಅದಾನಿ ಜೀ, ಅಂಬಾನಿ ಜೀ ದೊಡ್ಡ ರಾಜಕಾರಣಿಗಳನ್ನು ಕರೆತಂದರು, ಎಲ್ಲಾ ಪಿಎಸ್‌ಯುಗಳನ್ನು, ಮಾಧ್ಯಮಗಳನ್ನು ಖರೀದಿಸಿದರು. ಆದರೆ, ಅವರು ನನ್ನ ಸಹೋದರನನ್ನು ಖರೀದಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಹಾಗೆ ಮಾಡಲು ಆಗುವುದೇ ಇಲ್ಲ. ನಾನು ಆತನ ಬಗ್ಗೆ ಮತ್ತು ಎಲ್ಲರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಅವರು ಹೇಳಿದರು.

SCROLL FOR NEXT