ದೇಶ

ಪಾಣಿಪತ್‌: ಅಡುಗೆ ಅನಿಲ ಸಿಲಿಂಡರ್‌ ಸೋರಿಕೆಯಿಂದ ಮನೆಗೆ ಬೆಂಕಿ; ದಂಪತಿ, ನಾಲ್ವರು ಮಕ್ಕಳು ಸಾವು

Ramyashree GN

ಚಂಡೀಗಢ: ಅಡುಗೆ ಅನಿಲದ ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಪಾಣಿಪತ್‌ನಲ್ಲಿ ಒಂದೇ ಕುಟುಂಬದ ಆರು ಸದಸ್ಯರು ಗುರುವಾರ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಣಿಪತ್ ಜಿಲ್ಲೆಯ ಬಿಚ್ಪರಿ ಗ್ರಾಮದ ಬಳಿಯ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರಲ್ಲಿ ದಂಪತಿ ಹಾಗೂ ಅವರ ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ದಂಪತಿ ಮತ್ತು ಅವರ ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಪಾಣಿಪತ್‌ನ ತಹಸಿಲ್ ಕ್ಯಾಂಪ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಫೂಲ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ನಗರದ ಜನವಸತಿ ಪ್ರದೇಶದಲ್ಲಿ ವಾಸವಿದ್ದ ಕುಟುಂಬ ಪಶ್ಚಿಮ ಬಂಗಾಳದಿಂದ ವಲಸೆ ಬಂದಿತ್ತು. ದಂಪತಿ ಪಾಣಿಪತ್‌ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡ ಪತ್ತೆ ಹಚ್ಚುವಷ್ಟರಲ್ಲಿ ಸಂತ್ರಸ್ತರು ಸುಟ್ಟು ಕರಕಲಾಗಿದ್ದರು.

ಮೃತರನ್ನು ಅಬ್ದುಲ್ (45), ಅವರ 40 ವರ್ಷದ ಪತ್ನಿ, 18 ಮತ್ತು 16 ವರ್ಷದ ಇಬ್ಬರು ಪುತ್ರಿಯರು ಮತ್ತು 12 ಮತ್ತು 10 ವರ್ಷದ ಇಬ್ಬರು ಪುತ್ರರು ಎಂದು ಗುರುತಿಸಲಾಗಿದೆ.

SCROLL FOR NEXT