ದೇಶ

ರಾಷ್ಟ್ರ ರಾಜಧಾನಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ಹನುಮಾನ್ ಮಂದಿರ, ಮಜರ್ ಧ್ವಂಸ!

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯ ಭಜನ್‌ಪುರ ಪ್ರದೇಶದಲ್ಲಿ ಭಾನುವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಪಿಡಬ್ಲ್ಯೂಡಿ ಇಲಾಖೆ ಹನುಮಾನ್ ಮಂದಿರ ಮತ್ತು ಮಜರ್ ನ್ನು ಧ್ವಂಸಗೊಳಿಸಿದೆ. ಉದ್ದೇಶಿತ ರಸ್ತೆ ವಿಸ್ತರಣೆ ಯೋಜನೆಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಈ ಧಾರ್ಮಿಕ ಕೇಂದ್ರಗಳನ್ನು ಕೆಡವಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಒತ್ತುವರಿ ತೆರವು ಕಾರ್ಯಾಚರಣೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಕೆಲವು ದಿನಗಳ ಹಿಂದೆ ನಡೆದ ಧಾರ್ಮಿಕ ಸಮಿತಿ ಸಭೆಯಲ್ಲಿ ಎರಡೂ ಕಟ್ಟಡಗಳನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸ್ಥಳೀಯ ಬೆಂಬಲದೊಂದಿಗೆ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಉಪ ಕಮಿಷನರ್ (ಈಶಾನ್ಯ) ಜಾಯ್ ಟಿರ್ಕಿ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪಿಡಬ್ಲ್ಯುಡಿ ಇಲಾಖೆಯ ತಂಡವು ಭದ್ರತಾ ಪಡೆಗಳೊಂದಿಗೆ ಚೌಕ್ ಪ್ರದೇಶದಲ್ಲಿ ಹನುಮಾನ್ ಮಂದಿರ ಮತ್ತು ಮಜರ್ ತೆರವು ಕಾರ್ಯಾಚರಣೆಯನ್ನು ಆರಂಭಿಸಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

ಇದು ಪಿಡಬ್ಲ್ಯೂಡಿ ರಸ್ತೆಯಾಗಿದ್ದು, ಕಟ್ಟಡ ತೆರವಿಗೆ ಸಂಬಂಧಿತ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅದನ್ನು ತೆರವುಗೊಳಿಸರಿಲ್ಲ. ಆದ್ದರಿಂದ ಇಂದು ಅವುಗಳನ್ನು ಕೆಡವಲಾಗಿದೆ  ಎಂದು ಸೀಲಂಪುರ ಎಸ್ ಡಿಎಂ ಶರತ್ ಕುಮಾರ್ ಹೇಳಿದರು. 

SCROLL FOR NEXT