ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ನಡುವೆ ಕುಕಿ ಬುಡಕಟ್ಟು ಜನಾಂಗದವರ ರಕ್ಷಣೆಗಾಗಿ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಬೇಕೆಂಬ ಮಣಿಪುರ ಬುಡಕಟ್ಟು ವೇದಿಕೆಯ ಮನವಿಯನ್ನು ಸುಪ್ರೀಂ ಕೋರ್ಟ್ (ಎಸ್ಸಿ) ಮಂಗಳವಾರ ತಿರಸ್ಕರಿಸಿದೆ.
ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು ಹಿಂಸಾಚಾರದ ಹಿಂದೆ ಕೆಲವು ಮೈಟಿ ಉಗ್ರಗಾಮಿ ಗುಂಪು ಬೆಂಬಲಿತ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿ, ಕುಕಿ ಬುಡಕಟ್ಟು ಜನಾಂಗದವರ ರಕ್ಷಣೆಗಾಗಿ ಪಡೆಗಳನ್ನು ನಿಯೋಜಿಸಬೇಕೆಂದು ನ್ಯಾಯಾಲಯದ ಮನವಿ ಮಾಡಿಕೊಂಡರು.
ಕ್ರಮ ಕೈಗೊಳ್ಳುವಂತೆ ಭಾರತೀಯ ಸೇನೆಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೇಳುತ್ತಿದ್ದೀರಿ. ನಮ್ಮ ನ್ಯಾಯಾಲಯದ ಕಳೆದ 70 ವರ್ಷಗಳ ಇತಿಹಾಸದಲ್ಲಿ ಸೇನೆಗೆ ಯಾವುದೇ ನಿರ್ದೇಶನ ನೀಡಿಲ್ಲ. ಸೇನೆಯ ಮೇಲಿನ ನಾಗರಿಕ ನಿಯಂತ್ರಣ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವಾಗಿದ್ದು, ನ್ಯಾಯಾಲಯ ಈ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಿಸಲು ಸುಪ್ರೀಂ ಕೋರ್ಟ್ ಬಳಸದಿರಿ: ಅರ್ಜಿದಾರರಿಗೆ ಸರ್ವೋಚ್ಛ ನ್ಯಾಯಾಲಯ ಚಾಟಿ
"ಕಳೆದ 72 ವರ್ಷಗಳಲ್ಲಿ ನಾವು ಭಾರತೀಯ ಸೇನೆಗೆ ಅಂತಹ ನಿರ್ದೇಶನ ನೀಡಿಲ್ಲ. ಪ್ರಜಾಪ್ರಭುತ್ವದ ಶ್ರೇಷ್ಠ ಲಕ್ಷಣವೆಂದರೆ ಸೇನೆಯ ಮೇಲೆ ನಾಗರಿಕರ ನಿಯಂತ್ರಣ ಇರುವುದಾಗಿದ್ದು, ನಾವು ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ" ಎಂದು ಹೇಳಿತು.
ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಭದ್ರತೆ ಕಾಪಾಡುವುದು ಚುನಾಯಿತ ಸರ್ಕಾರದ ವ್ಯಾಪ್ತಿಗೆ ಬರಲಿದ್ದು ನ್ಯಾಯಾಲಯ ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಆ ಬಗೆಯ ನಿರ್ದೇಶನ ನೀಡುವುದು ಸೂಕ್ತವಲ್ಲ. ಹೀಗಾಗಿ ಸೇನೆಯ ನಿರ್ದಿಷ್ಟ ಪಡೆಯೊಂದನ್ನು ಎಲ್ಲಿ ನಿಯೋಜಿಸಬೆಕು ಎಂಬಿತ್ಯಾದಿಗಳ ಕುರಿತು ನ್ಯಾಯಾಲಯ ನಿರ್ದೇಶನ ನೀಡುವುದು ಸಾಧ್ಯವಿಲ್ಲ ಎಂದು ಅದು ವಿವರಿಸಿತು.
ಇದೇ ವೇಳೆ ಮಣಿಪುರದಲ್ಲಿ ಜನರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನ ನೀಡಿತು.
ಮಣಿಪುರ ಹಿಂಸಾಚಾರ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಹಿಂಸಾಚಾರ ತಡೆಗಟ್ಟಲು ತಾನು ಕೈಗೊಂಡ ಕ್ರಮಗಳನ್ನು ಸೂಚಿಸುವ ಹೊಸ ಸ್ಥಿತಿಗತಿ ವರದಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿತ್ತು.