ದೇಶ

ಸಂಸತ್ತು ಅಧಿವೇಶನ: ಉಭಯ ಸದನಗಳಲ್ಲಿ ವಿಪಕ್ಷಗಳಿಂದ ನೊಟೀಸ್, ಮಣಿಪುರ ಹಿಂಸಾಚಾರ ಬಗ್ಗೆ ಚರ್ಚೆಗೆ ಒತ್ತಾಯ

Sumana Upadhyaya

ನವದೆಹಲಿ: ಇಂದು ಗುರುವಾರ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ, ಕಳೆದ ಮೂರು ತಿಂಗಳಿನಿಂದ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೊ ಹೊರಬಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಿವಾದದಿಂದ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಒತ್ತಾಯಿಸಿ ಹಲವಾರು ವಿರೋಧ ಪಕ್ಷದ ಸಂಸದರು ಉಭಯ ಸದನಗಳಲ್ಲಿ ನೊಟೀಸ್ ನೀಡಿದ್ದಾರೆ. 

ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ನೊಟೀಸ್ ನೀಡಿ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಲೋಕಸಭೆಯಲ್ಲಿ ಈ ವಿಷಯದ ಕುರಿತು ಮುಂದೂಡಿಕೆ ನಿರ್ಣಯ ಮಂಡಿಸಿದರು.

ಕಾಂಗ್ರೆಸ್‌ನ ಮಾಣಿಕಂ ಟ್ಯಾಗೋರ್ ಲೋಕಸಭೆಯಲ್ಲಿ ಮಣಿಪುರದ ಪರಿಸ್ಥಿತಿಯ ಕುರಿತು 'ಈಶಾನ್ಯ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ' ಕುರಿತು ಚರ್ಚೆಗೆ ಒತ್ತಾಯಿಸಿ ಮುಂದೂಡಿಕೆ ಸೂಚನೆ ನೀಡಿದರು.

ಸಿಪಿಐ ಸಂಸದ ಬಿನೋಯ್ ವಿಶ್ವಂ, ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಝಾ ಮತ್ತು ಕಾಂಗ್ರೆಸ್ ಸಂಸದ ರಂಜೀತ್ ರಂಜನ್ ಅವರು ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಮೇಲ್ಮನೆಯಲ್ಲಿ ನಿಯಮ 267 ರ ಅಡಿಯಲ್ಲಿ ವ್ಯವಹಾರ ನೊಟೀಸ್ ನೀಡಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

SCROLL FOR NEXT