ದೇಶ

ಬಿಜೆಪಿ ಸಂಸದೀಯ ಪಕ್ಷ ಸಭೆ: ಮುಂಗಾರು ಅಧಿವೇಶನ ಕಾರ್ಯಕಲಾಪ ತಂತ್ರಗಾರಿಕೆ ಕುರಿತು ಚರ್ಚೆ

Sumana Upadhyaya

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯುತ್ತಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅವರ ಸಂಪುಟದ ಸಚಿವರು, ಸಂಸದರು ಭಾಗವಹಿಸಿದ್ದಾರೆ.

ಲೋಕಸಭೆಯ ಮುಂಗಾರು ಅಧಿವೇಶನದ ಕಾರ್ಯತಂತ್ರವನ್ನು ರೂಪಿಸಲು ಬಿಜೆಪಿ ಸಂಸದೀಯ ಪಕ್ಷದ ಸಭೆ ಕರೆದಿದೆ. ಬೆಳಗ್ಗೆ 9:30ಕ್ಕೆ ಆರಂಭವಾದ ಸಭೆಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಸೇರಿದಂತೆ ಹಲವರು ಆಗಮಿಸಿದ್ದರು. ಪಕ್ಷದ ಸಂಸದರೊಂದಿಗೆ ನಿರ್ಣಾಯಕ ಸಂಘಟನಾ ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. 

ಜುಲೈ 20 ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನವು ಮಣಿಪುರ ಹಿಂಸಾಚಾರದ ವಿಷಯದ ಬಗ್ಗೆ ಪ್ರಧಾನಿಯವರ ಹೇಳಿಕೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದಂತೆ ಸದನದೊಳಗೆ ಗದ್ದಲ ಮತ್ತು ತೀವ್ರ ಕೋಲಾಹಲ ಉಂಟಾಗಿದ್ದು ಫಲಪ್ರದ ಚರ್ಚೆಗಳು ನಡೆಯುತ್ತಿಲ್ಲ. 

ಹಿಂಸಾಚಾರ ಪೀಡಿತ ಮಣಿಪುರ ರಾಜ್ಯವು ಮೇ 3 ರಿಂದ ಗಲಭೆಗಳಿಗೆ ಸಾಕ್ಷಿಯಾಗಿದೆ. ಮೇ 4 ರಂದು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮತ್ತು ಜನಸಮೂಹದಿಂದ ಲೈಂಗಿಕ ದೌರ್ಜನ್ಯವನ್ನು ತೋರಿಸುವ ವೀಡಿಯೊವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ರಾಜಕೀಯ ಪಕ್ಷಗಳನ್ನು ಬೆಚ್ಚಿಬೀಳಿಸಿದೆ.

ಮೂರು ದಿನಗಳ ಕಾಲ ಸದನವನ್ನು ಮುಂದೂಡಲಾಗಿದ್ದು, ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಅಮಾನತುಗೊಳಿಸಿದ್ದರಿಂದ ನಿನ್ನೆಯಿಂದ ಸಂಸತ್ತು ಆವರಣದಲ್ಲಿ ಪ್ರತಿಪಕ್ಷಗಳು ಧರಣಿ ಕುಳಿತಿದ್ದಾರೆ. ಮಣಿಪುರ ಹಿಂಸಾಚಾರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಹೇಳಿಕೆ ನೀಡಬೇಕೆಂಬುದು ಪ್ರತಿಪಕ್ಷಗಳ ಆಗ್ರಹವಾಗಿದೆ.

SCROLL FOR NEXT