ಮುಂಬೈ: ಮಹಾರಾಷ್ಟ್ರದ ನಾಸಿಕ್ನ ಮನ್ಮಾಡ್ ಜಂಕ್ಷನ್ನಲ್ಲಿ ನಿಗದಿತ ಸಮಯಕ್ಕೆ 90 ನಿಮಿಷ ಮೊದಲೇ ಆಗಮಿಸಿದ ಗೋವಾ ಎಕ್ಸ್ಪ್ರೆಸ್ ರೈಲು, ಐದು ನಿಮಿಷ ನಿಂತು, 45 ಪ್ರಯಾಣಿಕರನ್ನು ಬಿಟ್ಟು ಹೊರಟು ಹೋಗಿರುವ ಘಟನೆ ಗುರವಾರ ನಡೆದಿದೆ.
ದೆಹಲಿಗೆ ಹೊರಟಿದ್ದ ವಾಸ್ಕೋಡಗಾಮಾ-ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್ಪ್ರೆಸ್ ರೈಲು ಗುರುವಾರ ಬೆಳಗ್ಗೆ 10. 35ಕ್ಕೆ ಮನ್ಮಾಡ್ ಜಂಕ್ಷನ್ಗೆ ಆಗಮಿಸಬೇಕಿತ್ತು. ಆದರ ನಿಗದಿತ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿ ಅಂದರೆ ಬೆಳಗ್ಗೆ 9. 05ಕ್ಕೆ ಆಗಮಿಸಿದೆ. ರೈಲು ಮಾರ್ಗ ಬದಲಿಸಿದ ಕಾರಣ ಬೇಗ ಬಂದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಗೋವಾ ಗಡಿಯಲ್ಲಿ ಭೂ ಕುಸಿತ: ರೈಲು ಸಂಚಾರಕ್ಕೆ ಅಡ್ಡಿ
ಒಂದೂವರೆ ಗಂಟೆ ಮೊದಲೇ ಬಂದ ರೈಲು ತನ್ನ ನಿಗದಿತ ಸಮಯದ ವರೆಗೆ ಕಾಯಬೇಕಿತ್ತು. ಆದರೆ ಕೇವಲ ಐದು ನಿಮಿಷ ಮನ್ಮಾಡ್ ಜಂಕ್ಷನ್ನಲ್ಲಿ ನಿಲ್ಲಿಸಿ ಹೊರಟೇ ಹೋಗಿದೆ. ಇದರಿಂದಾಗಿ ಮನ್ಮಾಡ್ ಜಂಕ್ಷನ್ನಲ್ಲಿ ಹತ್ತಬೇಕಿದ್ದ 45 ಮಂದಿ ಪ್ರಯಾಣಿಕರು ರೈಲು ತಪ್ಪಿಸಿಕೊಂಡಿದ್ದಾರೆ.
ಎಷ್ಟೋ ಜನರು 9.45 ರ ಸುಮಾರಿಗೆ ನಿಲ್ದಾಣಕ್ಕೆ ಬಂದಿದ್ದರು. ಆದರೆ ಅವರಿಗೂ ರೈಲು ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ನಿಲ್ದಾಣದ ವ್ಯವಸ್ಥಾಪಕರ ಕಚೇರಿಗೆ ತೆರಳಿ ತಮ್ಮ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಇದು ರೈಲ್ವೆ ಸಿಬ್ಬಂದಿಯ ತಪ್ಪಾಗಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ರೈಲು ತಪ್ಪಿಸಿಕೊಂಡ ಜನರು ಗೀತಾಂಜಲಿ ಎಕ್ಸ್ಪ್ರೆಸ್ ಹತ್ತಿ, ಜಲಗಾಂವ್ಗೆ ಪ್ರಯಾಣಿಸಿದರು. ಅಲ್ಲಿ ಅವರು ಬರುವವರೆಗೂ ಗೋವಾ ಎಕ್ಸ್ಪ್ರೆಸ್ ಅನ್ನು ನಿಲ್ಲಿಸಲಾಯಿತು ಎಂದು ಕೇಂದ್ರ ರೈಲ್ವೇ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ಪುರೆ ಅವರು ಹೇಳಿದ್ದಾರೆ.