ದೇಶ

ರೈಲು ಅಪಘಾತದಲ್ಲಿ 1000 ಜನರು ಗಾಯಗೊಂಡಿದ್ದು, 100ಕ್ಕೂ ಹೆಚ್ಚು ರೋಗಿಗಳಿಗೆ ಐಸಿಯುವಿನಲ್ಲಿ ಚಿಕಿತ್ಸೆಯ ಅಗತ್ಯವಿದೆ: ಕೇಂದ್ರ ಆರೋಗ್ಯ ಸಚಿವ

Manjula VN

ಬಾಲಸೋರ್: ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 1000 ಜನರು ಗಾಯಗೊಂಡಿದ್ದು, 100ಕ್ಕೂ ಹೆಚ್ಚು ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾನುವಾರ ಹೇಳಿದ್ದಾರೆ.

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಭುವನೇಶ್ವರದ ಏಮ್ಸ್ ಮತ್ತು ಕಟಕ್ನ ವೈದ್ಯಕೀಯ ಕಾಲೇಜಿಗೆ ಮನ್ಸುಖ್ ಮಾಂಡವೀಯಾ ಅವರು ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಕರ ಅಪಘಾತದಲ್ಲಿ 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 100 ಕ್ಕೂ ಹೆಚ್ಚು ರೋಗಿಗಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ. ಅವರ ಚಿಕಿತ್ಸೆಗಾಗಿ ದೆಹಲಿ ಏಮ್ಸ್, ಲೇಡಿ ಹಾರ್ಡಿಂಜ್ ಆಸ್ಪತ್ರೆ ಮತ್ತು ಆರ್ಎಂಎಲ್ ಆಸ್ಪತ್ರೆಯ ಪರಿಣಿತ ವೈದ್ಯರು ಆಧುನಿಕ ಉಪಕರಣಗಳು ಮತ್ತು ಔಷಧಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ರೋಗಿಗಳ ಚಿಕಿತ್ಸೆ ಕುರಿತು ವಿವರವಾದ ಚರ್ಚೆ ನಡೆಸಲಾಗಿದ್ದು, ಕ್ರಿಯಾ ಯೋಜನೆಯನ್ನೂ ಕೂಡ ಸಿದ್ಧಪಡಿಸಲಾಗಿದೆ ಎಂದು ಹೇಳಿದರು. 

ಈ ನಡುವೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೂ ಕೂಡ ಗಾಯಾಳುಗಳನ್ನು ಭೇಟಿ ಮಾಡಲು, ಒಡಿಶಾದ ಸೊರೊ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.

ರೈಲು ದುರಂತದಲ್ಲಿ 288 ಪ್ರಯಾಣಿಕರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಾಲಸೋರ್ಜಿಲ್ಲಾ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

SCROLL FOR NEXT