ದೇಶ

ಮಹಾರಾಷ್ಟ್ರ: ಶಿವಸೇನೆ ನಾಯಕ ಸಂಜಯ್ ರಾವುತ್, ಸಹೋದರನಿಗೆ ಕೊಲೆ ಬೆದರಿಕೆ; ಐದನೇ ಆರೋಪಿ ಬಂಧನ

Ramyashree GN

ಮುಂಬೈ: ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಮತ್ತು ಅವರ ಶಾಸಕ ಸಹೋದರ ಸುನಿಲ್ ರಾವುತ್ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಜೀವ ಬೆದರಿಕೆ ಕರೆಯಲ್ಲಿ ಆರೋಪಿಯ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಆರೋಪಿಯು ರಾಜಕೀಯ ಕಾರ್ಯಕರ್ತನೂ ಆಗಿದ್ದು, ನಗರದ ಪೂರ್ವ ಉಪನಗರಗಳ ಸ್ಥಳೀಯ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಆತನ ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕ ಸುನೀಲ್ ರಾವುತ್ ಅವರೊಂದಿಗಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಸಹ ಒಳಗೊಂಡಿದೆ' ಎಂದು ಅವರು ಹೇಳಿದರು.

ಆರೋಪಿಯನ್ನು ಸದ್ಯ ಜೂನ್ 19ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಈ ಸಂಬಂಧ ಕಳೆದ ವಾರ ಕಂಜುರ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಪೊಲೀಸರು ಆರಂಭದಲ್ಲಿ ಇಬ್ಬರನ್ನು ಬಂಧಿಸಿದ್ದು, ಅವರ ವಿಚಾರಣೆಯ ವೇಳೆ ಕೆಲವರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಬೆದರಿಕೆ ಕರೆಗಳ ಹಿಂದಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT