ಅಮರಾವತಿ: 2024ರ ಆಂಧ್ರಪ್ರದೇಶ ಚುನಾವಣೆಯಲ್ಲಿ ತಮ್ಮ ಜನಸೇನಾ ಪಕ್ಷದ ಸ್ಪರ್ಧೆ ಖಚಿತ ಎಂದು ಪಕ್ಷದ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್ ಹೇಳಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ‘ಜನ ಸೇನಾ‘ ಪಕ್ಷವು ಸ್ಪರ್ಧಿಸಲಿದೆ ಎಂದು ಜನ ಸೇನಾ ಸಂಸ್ಥಾಪಕ ಹಾಗೂ ತೆಲುಗು ನಟ ಪವನ್ ಕಲ್ಯಾಣ್ ಘೋಷಿಸಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಕತಿಪುಡಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಜನ ಸೇನಾ‘ ಪಕ್ಷವು ವಿಧಾನಸಭೆಯನ್ನು ಪ್ರವೇಶಿಸಲಿದ್ದು, ಹೆಜ್ಜೆ ಗುರುತುಗಳನ್ನು ಮೂಡಿಸಲಿದೆ. ಸಾಧ್ಯವಾದಷ್ಟು ಜನರ ಪರವಾಗಿ ನಿಲುತ್ತೇವೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಇದನ್ನೂ ಓದಿ: ಎಂದಿಗೂ ರಾಜಕೀಯ ಸೇರಲ್ಲ: ಬಾಲಿವುಡ್ ನಟ ಮನೋಜ್ ಬಾಜಪೇಯಿ
ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದ ಮೂಲಕ ಚುನಾವಣಾ ಯಾತ್ರೆ ‘ವಾರಾಹಿ‘ಯನ್ನು ಆರಂಭಿಸಲಾಗಿದೆ. ಅನ್ನವರಂನಿಂದ ಆರಂಭವಾಗಿರುವ ಜನಸೇನಾ ಯಾತ್ರೆಯು ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಅಂತ್ಯಗೊಳ್ಳಲಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಸೋತ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಭೀಮಾವರಂ ಕೂಡ ಒಂದಾಗಿದೆ. ಆದರೆ ಷಡ್ಯಂತ್ರದಿಂದ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಕಲ್ಯಾಣ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ವೈ. ಎಸ್ ಜಗನ್ ಮೋಹನ್ ರೆಡ್ಡಿ ಸರಿಯಾದ ರೀತಿಯಲ್ಲಿ ಆಡಳಿತ ನಡೆಸಲಿ, ಇಲ್ಲದಿದ್ದರೆ ಮುಂದೊಂದು ದಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರನ್ನು ನೆಲದ ಮೇಲೆ ಕೂರುವಂತೆ ಮಾಡುವುದಾಗಿ ಕಲ್ಯಾಣ್ ಹೇಳಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆ ಆರೋಪಕ್ಕೆ ಪುರಾವೆ ಇಲ್ಲ; ಬ್ರಿಜ್ ಭೂಷಣ್ ವಿರುದ್ಧದ ಪ್ರಕರಣ ರದ್ದತಿಗೆ ದೆಹಲಿ ಪೊಲೀಸ್ ಕೋರಿಕೆ
2019ರ ಚುನಾವಣೆಯಲ್ಲಿ ರಾಪಾಕ ವರಪ್ರಸಾದ್ ಎಂಬುವವರ ಮೂಲಕ ‘ಜನ ಸೇನಾ‘ ಕೇವಲ ಒಂದು ವಿಧಾನಸಭಾ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.