ಪಾಟ್ನಾ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ವಿರೋಧ ಪಕ್ಷವನ್ನು ರೂಪಿಸಲು ಇಂದು ಪಾಟ್ನಾದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಯನ್ನು ವ್ಯಂಗ್ಯವಾಡಿದ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ವಿರೋಧ ಪಕ್ಷಗಳು ಒಗ್ಗಟ್ಟಾಗಿಲ್ಲ ಎಂದು ಹೇಳಿದ್ದಾರೆ.
'ಚಹಾ ಕುಡಿಯಲು ಒಟ್ಟಿಗೆ ಕುಳಿತರೆ ಪ್ರತಿಪಕ್ಷಗಳು ಒಂದಾಗಿವೆ ಎಂದರ್ಥವಲ್ಲ' ಎಂದು ಸುಶೀಲ್ ಮೋದಿ ಪ್ರತಿಪಕ್ಷಗಳ ಸಭೆಗೂ ಮುನ್ನ ಹೇಳಿದರು.
'ಯೇ ಜೋ ಬಾರಾತ್ ಲಗೀ ಹೈ, ಉಸ್ಮೆ ಸಭಿ ದುಲ್ಹೆ ಹೈ, ಬಾರಾತಿ ಕೋಯಿ ನಹೀ ಹೈ (ಇದು ಮದುವೆಯ ಮೆರವಣಿಗೆಯಾಗಿದ್ದು, ಇದರಲ್ಲಿ ಎಲ್ಲರೂ ವರರು. ಆದರೆ, ಅತಿಥಿಗಳು ಇರುವುದಿಲ್ಲ) ಎಂದು ಅವರು ಈ ಮೊದಲು ಹೇಳಿದ್ದರು.
'ನಿತೀಶ್ ಕುಮಾರ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಸ್ಪರ್ಧಿಗಳಾಗಿ ಕಾಣುತ್ತಿದ್ದಾರೆ'. ಎಲ್ಲರೂ ಸ್ಪರ್ಧಿಗಳಾಗಿರುವ ಇಂತಹ ಕಾರ್ಯಕ್ರಮವನ್ನು ನಿತೀಶ್ ಕುಮಾರ್ ಆಯೋಜಿಸಿದ್ದಾರೆ' ಎಂದರು.
'ನಿತೀಶ್ ಜಿ ನೆ ಐಸಿ ಬಾರಾತ್ ಲಗಾಯ್ ಹೈ, ಜಿಸ್ಮೆ ಸಬ್ ದುಲ್ಹೇ ಹೈ. ಪ್ರತಿಯೊಬ್ಬರೂ ತಮ್ಮ ಷರತ್ತುಗಳನ್ನು ಇತರರು ಒಪ್ಪಿಕೊಳ್ಳುವಂತೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಸುಗ್ರೀವಾಜ್ಞೆ ವಿಚಾರದಲ್ಲಿ ಕಾಂಗ್ರೆಸ್ ಸಹಕಾರ ಘೋಷಿಸುವವರೆಗೆ ಸಭೆಗೆ ಹಾಜರಾಗುವುದಿಲ್ಲ ಎಂದು ಕೇಜ್ರಿವಾಲ್ ಬೆದರಿಕೆ ಹಾಕಿದ್ದಾರೆ. ಕೆಲವು ಒಮ್ಮತಕ್ಕೂ ಬರುವ ಸಾಧ್ಯತೆ ಇದೆ' ಎಂದು ಮೋದಿ ಹೇಳಿದರು.
ಇದನ್ನೂ ಓದಿ: 'ಕಾಂಗ್ರೆಸ್ ಮುಕ್ತ ಭಾರತ'ಕ್ಕಾಗಿ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿದೆ: ಸುಶೀಲ್ ಕುಮಾರ್ ಮೋದಿ
ಈಮಧ್ಯೆ, ಬಿಹಾರದ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಅವರು ಪ್ರತಿಪಕ್ಷಗಳ ಸಭೆ ಕುರಿತು ವ್ಯಂಗ್ಯವಾಡಿದರು ಮತ್ತು ಇದು 'ಘಾತುಕರ ಘಟಬಂಧನ್'. ದೇಶವನ್ನೇ ಮೂರ್ಖರನ್ನಾಗಿಸಲು ತಯಾರಿ ನಡೆಸುತ್ತಿದ್ದಾರೆ. ಅವರಿಗೆ ಯಾವುದೇ ತತ್ವ ಅಥವಾ ನೀತಿ ಇಲ್ಲ ಮತ್ತು ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಎದುರಿಸಲು ತಂತ್ರವನ್ನು ರೂಪಿಸಲು ದೇಶಾದ್ಯಂತದ ವಿರೋಧ ಪಕ್ಷಗಳ ನಾಯಕರು ಪಾಟ್ನಾದಲ್ಲಿ ಇಂದು ಸಭೆ ಸೇರಲಿದ್ದಾರೆ.