ದೇಶ

ಬಿಜೆಪಿ ಪುಲ್ವಾಮಾ ಹುತಾತ್ಮ ಯೋಧರ ಪತ್ನಿಯರ ದಾರಿತಪ್ಪಿಸುತ್ತಿದೆ: ರಾಜಸ್ಥಾನ ಸಿಎಂ

Lingaraj Badiger

ಜೈಪುರ: ಭಾರತೀಯ ಜನತಾ ಪಕ್ಷದ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ ಮತ್ತು ರಾಜಸ್ಥಾನದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾನುವಾರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಪುಲ್ವಾಮಾ, ಬಾಲಾಕೋಟ್ ಅಥವಾ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ರಾಜಸ್ಥಾನ ಸರ್ಕಾರ ನೀಡಿದ ಪ್ಯಾಕೇಜ್ ದೇಶದಲ್ಲಿ ಎಲ್ಲಿಯೂ ಇಲ್ಲ. ನಾನು ಸುಮಾರು 25 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಆ ಪ್ಯಾಕೇಜ್ ಘೋಷಿಸಿದ್ದೆ.

ಪ್ಯಾಕೇಜ್ ಅಡಿಯಲ್ಲಿ ಹುತಾತ್ಮರ ಕುಟುಂಬಗಳಿಗೆ ಭೂಮಿ ಮತ್ತು ವಸತಿ, ಶಾಲೆಗಳಿಗೆ ಹುತಾತ್ಮರ ಹೆಸರಿಡಲಾಗಿದೆ ಮತ್ತು ಅವರ ಮಕ್ಕಳಿಗೆ ಉದ್ಯೋಗ ಮೀಸಲಿಡಲಾಗಿದೆ ಎಂದು ಹೇಳಿದರು.

ಅನುಕಂಪದ ಆಧಾರದ ಮೇಲೆ ತಮ್ಮ ಮಕ್ಕಳಿಗೆ ಮಾತ್ರವಲ್ಲದೆ ಸಂಬಂಧಿಕರಿಗೂ ಸರ್ಕಾರಿ ಉದ್ಯೋಗ ಸಿಗುವಂತೆ ನಿಯಮಗಳಲ್ಲಿ ಬದಲಾವಣೆಗೆ ಒತ್ತಾಯಿಸಿ ಹುತಾತ್ಮ ಯೋಧರ ವಿಧವಾ ಪತ್ನಿಯರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.

"2019ರಲ್ಲಿ ಪುಲ್ವಾಮಾ ದಾಳಿ ನಡೆದಿದೆ. ನಾಲ್ಕು ವರ್ಷಗಳ ನಂತರ ಅವರು ಏಕೆ ಕೆಲಸ ಕೇಳುತ್ತಿದ್ದಾರೆ? ಆಗ ಯಾವುದೇ ಬೇಡಿಕೆ ಇರಲಿಲ್ಲ ಮತ್ತು ನಾಲ್ಕು ವರ್ಷಗಳ ನಂತರ ಈಗ ಇದ್ದಕ್ಕಿದ್ದಂತೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅವರು(ಬಿಜೆಪಿ ನಾಯಕರು) ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ರಾಜಸ್ಥಾನದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಗೆಹ್ಲೋಟ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

SCROLL FOR NEXT