ದೇಶ

ರೈಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಟಿಟಿಇಯ ಬಂಧನ, ರೈಲ್ವೆಯಿಂದ ವಜಾ

Lingaraj Badiger

ಲಖನೌ: ಕೋಲ್ಕತ್ತಾ-ಅಮೃತಸರ ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ರಜೆಯಲ್ಲಿದ್ದ ರೈಲ್ವೆ ಟಿಕೆಟ್ ಪರೀಕ್ಷಕ(ಟಿಟಿಇ)ನನ್ನು ಬಂಧಿಸಲಾಗಿದೆ ಮತ್ತು ಭಾರತೀಯ ರೈಲ್ವೆ ಕೆಲಸದಿಂದಲೇ ವಜಾಗೊಳಿಸಿದೆ.

ಮಾರ್ಚ್ 13ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಚಾರ್‌ಬಾಗ್ ನಿಲ್ದಾಣದಲ್ಲಿ ಪ್ರಯಾಣಿಕರ ಪತಿ ನೀಡಿದ ದೂರಿನ ಮೇರೆಗೆ ಮದ್ಯದ ಅಮಲಿನಲ್ಲಿದ್ದ ಟಿಟಿಇ ಮುನ್ನಾ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಜಿಆರ್‌ಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮುನ್ನಾ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ" ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ವಿಮಾನಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯ ಬೆನ್ನಲ್ಲೇ ರೈಲಿನಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ರೈಲ್ವೆ ಇಲಾಖೆ ಕಠಿಣ ಕ್ರಮ ತೆಗೆದುಕೊಂಡಿದೆ.

ಬಿಹಾರದ ಬೇಗುಸರಾಯ್ ನಿವಾಸಿಯಾಗಿರುವ ಮುನ್ನಾ ಕುಮಾರ್ ಅವರನ್ನು ಸಹರಾನ್‌ಪುರದಲ್ಲಿ ಟಿಟಿಇ ನಿಯೋಜಿಸಲಾಗಿತ್ತು.

ಮಹಿಳೆ ಮತ್ತು ಆಕೆಯ ಪತಿ ಬಿಹಾರದ ಕಿಯುಲ್‌ನಿಂದ ಪಂಜಾಬ್‌ನ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದರು ಎಂದು ಜಿಆರ್‌ಪಿ ಇನ್‌ಸ್ಪೆಕ್ಟರ್ ನವರತ್ನ ಗೌತಮ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಘಟನೆಯ ಸಮಯದಲ್ಲಿ ಮುನ್ನಾ ಕುಮಾರ್ ಕುಡಿದಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುವುದು ಎಂದು ಗೌತಮ್ ಹೇಳಿದ್ದಾರೆ.

SCROLL FOR NEXT