ದೇಶ

ಅದಾನಿ ವಿವಾದ: ಇಡಿ ಕಚೇರಿಗೆ ಮೆರವಣಿಗೆ ಹೊರಟಿದ್ದ ವಿಪಕ್ಷ ನಾಯಕರ ತಡೆದ ದೆಹಲಿ ಪೊಲೀಸರು, ಪ್ರತಿಭಟನೆ ರದ್ದು

Manjula VN

ನವದೆಹಲಿ: ಅದಾನಿ ಸಮೂಹದ ಮೇಲಿನ ವಂಚನೆ ಆರೋಪಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲು ಸಂಸತ್ ಭವನದಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆಯನ್ನು ರದ್ದುಪಡಿಸಿದ್ದಾರೆ.

ಅದಾನಿ ಪ್ರಕರಣವನ್ನು  ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆ ನಡೆಸುವಂತೆ ಒತ್ತಾಯಿಸಿ 18 ವಿರೋಧ ಪಕ್ಷಗಳ ನಾಯಕರು ಸಂಸತ್ತಿನಿಂದ ಇಂದು ಮಧ್ಯಾಹ್ನ ಮೆರವಣಿಗೆ ನಡೆಸಿತು. ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ದೆಹಲಿ ಪೊಲೀಸರು ನಾಯಕರನ್ನು ತಡೆದರು.

ಪ್ರತಿಭಟನಾನಿರತ ನಾಯಕರು ಇ.ಡಿ ಕಚೇರಿ ಕಡೆಗೆ ಮೆರವಣಿಗೆ ಸಾಗುವುದನ್ನು ತಡೆಯಲು ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಭಾರಿ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಅಲ್ಲದೆ, ಸ್ಥಳದಲ್ಲಿ ಸೆಕ್ಷನ್ 144ನ್ನೂ ಜಾರಿಗೊಳಿಸಿದ್ದರು. ಹೀಗಾಗಿ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಲು ಸಾಧ್ಯವಾಗಲಿಲ್ಲ.

ವಿಪಕ್ಷ ಸದಸ್ಯರಿಗೆ ಮುಂದೆ ಸಾಗಲು ಸಾಧ್ಯವಾಗದೆ ಇದ್ದಾಗ, ಮೆರವಣಿಗೆಯನ್ನು ರದ್ದುಗೊಳಿಸಿ ಸಂಸತ್‌ಗೆ ವಾಪಸಾದರು. ತಾವು ಇ.ಡಿಯಿಂದ ಅಪಾಯಿಂಟ್‌ಮೆಂಟ್ ಕೇಳಿದ್ದು, ಶೀಘ್ರವೇ ಜಂಟಿ ದೂರು ಪತ್ರ ಬಿಡುಗಡೆ ಮಾಡುವುದಾಗಿ ಹೇಳಿದರು.

ನಮ್ಮನ್ನು ಇಲ್ಲಿಯೇ ತಡೆದಿದ್ದಾರೆ. ನಾವು 200 ಜನರಿದ್ದರೆ, ಅಲ್ಲಿ ಕನಿಷ್ಠ 2,000 ಪೊಲೀಸ್ ಸಿಬ್ಬಂದಿ ಇದ್ದಾರೆ. ಅವರು ನಮ್ಮ ಧ್ವನಿಯನ್ನು ಹತ್ತಿಕ್ಕಲು ಬಯಸಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ" ಎಂದು ಪೊಲೀಸರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿದರು.

ಈ ವಿಚಾರವನ್ನು ಯಾರಾದರೂ ಚರ್ಚೆಯೊಂದರಲ್ಲಿ ಪ್ರಸ್ತಾಪಿಸಿದರೆ, ಅವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ" ಎಂದು ಹರಿಹಾಯ್ದರು.

ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಅವರು ಮಾತನಾಡಿ, ವಿರೋಧ ಪಕ್ಷಗಳ 200 ಸಂಸದರು ಅದಾನಿ ವಿಚಾರ ಸಂಬಂಧ ಮನವಿ ಪತ್ರ ಸಲ್ಲಿಸಲು ಇಡಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದೆವು. ಆದರೆ, ಪೊಲೀಸರು ನಮ್ಮನ್ನು ಬಲವಂತವಾಗಿ ತಡೆಹಿಡಿದರು. ಇದೀಗ ನಾವು ಮತ್ತೆ ಸಂಸತ್ತಿಗೆ ಹೋಗುತ್ತಿದ್ದೇವೆ. ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಮಾತನಾಡಿ, ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ನಮ್ಮ ಪ್ರತಿಭಟನಾ ಮೆರವಣಿಗೆಯನ್ನು ಮುಂದುವರೆಸುತ್ತೇವೆಂದು ತಿಳಿಸಿದ್ದಾರೆ.

SCROLL FOR NEXT