ನವದೆಹಲಿ: ಕಳೆದ ಏಳು ದಿನಗಳಿಂದ ಲೋಕಸಭೆಯಲ್ಲಿ ನಿರಂತರ ಅಡೆತಡೆಗಳ ಮಧ್ಯೆ, ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ತಮ್ಮ ಚೇಂಬರ್ನಲ್ಲಿ ಸರ್ವಪಕ್ಷ ಸಭೆಯನ್ನು ಕರೆದರು.
ಅದಾನಿ ವಿಷಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗಳ ಬಗ್ಗೆ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ಗದ್ದಲದ ನಡುವೆ ಸದನವನ್ನು ಮತ್ತೆ ಮಧ್ಯಾಹ್ನ 2 ಗಂಟೆಗೆ ಮುಂದೂಡಿದ ನಂತರ ಸಭೆ ಕರೆಯಲಾಗಿದೆ.
ಈಮಧ್ಯೆ, ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಪ್ರತಿಪಕ್ಷಗಳ ನಾಯಕರನ್ನು ಬಲೆಗೆ ಬೀಳಿಸಲು ಕೇಂದ್ರವು ಸಂಚು ಮಾಡುತ್ತಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
'ನಮ್ಮ ಪ್ರಧಾನಿ ಅಸಮರ್ಥರು ಎಂಬುದು ಭಾರತದ ಸಾಮಾನ್ಯ ಜನರಿಗೆ ಶೀಘ್ರದಲ್ಲೇ ತಿಳಿಯುತ್ತದೆ. ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ದುರ್ಬಲ, ಹೇಡಿ, ನಾವು ಅಧಿಕಾರದಲ್ಲಿದ್ದರೆ ಪಾಕಿಸ್ತಾನದಿಂದ ದಾವುದ್ ಇಬ್ರಾಹಿಂ ಅನ್ನು ಕರೆತರುತ್ತೇವೆ ಎಂದು ಹೇಳುತ್ತಿದ್ದರು. ಅವರು ರಾಹುಲ್ ಗಾಂಧಿಯನ್ನು ಮಾನಹಾನಿ ಮಾಡುವಲ್ಲಿ ನಿರತರಾಗಿದ್ದಾರೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅದಾನಿ ವಿಚಾರವಾಗಿ ಜೆಪಿಸಿ ತನಿಖೆ, ಲಂಡನ್ನಲ್ಲಿ ರಾಹುಲ್ ಗಾಂಧಿ ಹೇಳಿಕೆ ವಿಷಯಗಳಿಂದ ಸಂಸತ್ತು ನಿಷ್ಕ್ರಿಯ
ಪ್ರತಿಪಕ್ಷ ನಾಯಕರನ್ನು ಸಿಬಿಐ ಮತ್ತು ಇ.ಡಿ ಬಲೆಗೆ ಬೀಳಿಸಲು ಪ್ರಧಾನಿ ಮತ್ತು ಅವರ ಸರ್ಕಾರ ಷಡ್ಯಂತ್ರಗಳನ್ನು ನಡೆಸುತ್ತಿದೆ. ದೇಶದಿಂದ ಸಾವಿರಾರು ಕೋಟಿ ಲೂಟಿ ಮಾಡಿ ಕೆರಿಬಿಯನ್ ಸಮುದ್ರದ ಬಳಿ ಮೋಜು ಮಾಡುತ್ತಿರುವ ರೀತಿಯನ್ನು ನಾವು ನೋಡುತ್ತಿದ್ದೇವೆ. ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸತ್ತಿನಲ್ಲಿ ಕಲಾಪ ನಡೆಸುವುದು ಸರ್ಕಾರದ ಕರ್ತವ್ಯ. ಪ್ರತಿಪಕ್ಷಗಳು ತಮ್ಮ ಅಭಿಪ್ರಾಯವನ್ನು ಹೇಳಲು ಸರ್ಕಾರ ಬಿಡುವುದಿಲ್ಲ. ಸದನದ ಅಧ್ಯಕ್ಷರು ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡುತ್ತಾರೆ.ಯಾರಾದರೂ ಕ್ಷಮೆಯಾಚಿಸುವ ಅಗತ್ಯವಿದ್ದರೆ ಅದರು ಪ್ರಧಾನಿ ಮೋದಿಯವರೇ ಎಂದು ಚೌಧರಿ ಹೇಳಿದರು.