ದೇಶ

ವಿರೋಧ ಪಕ್ಷದ ಸದಸ್ಯರ ಗದ್ದಲದ ನಡುವೆ ಸಂಸತ್ತಿನ ಉಭಯ ಸದನಗಳ ಕಲಾಪ ಮುಂದೂಡಿಕೆ

Ramyashree GN

ನವದೆಹಲಿ: ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ಲೋಕಸಭೆಯ ಕಲಾಪವನ್ನು ಸೋಮವಾರ ಸಂಜೆ 4 ಗಂಟೆಗೆ ಮುಂದೂಡಲಾಯಿತು. ಇತ್ತ ರಾಜ್ಯಸಭೆಯಲ್ಲೂ ಅದಾನಿ ವಿಚಾರವಾಗಿ ವಿಪಕ್ಷಗಳು ಎಬ್ಬಿಸಿದ ಗದ್ದಲದಿಂದಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಲೋಕಸಭೆಯ ಕಲಾಪ ಆರಂಭವಾಗುತ್ತಲೇ ಕಪ್ಪು ಸ್ಕಾರ್ಫ್‌ಗಳನ್ನು ಧರಿಸಿದ ಕಾಂಗ್ರೆಸ್ ಸದಸ್ಯರು ಬಾವಿಗೆ ನುಗ್ಗಿದರು. ಕಾಂಗ್ರೆಸ್‌ ಸದಸ್ಯರಾದ ಟಿಎನ್‌ ಪ್ರತಾಪನ್‌ ಮತ್ತು ಹೈಬಿ ಈಡನ್‌ ಅವರು ಭಿತ್ತಿಚಿತ್ರಗಳನ್ನು ಹಿಡಿದುಕೊಂಡು, ತಮ್ಮ ಸ್ಕಾರ್ಫ್‌ಗಳೊಂದಿಗೆ ಆದೇಶ ಪತ್ರಗಳನ್ನು ಸಭಾಪತಿಗಳ ಕುರ್ಚಿಯತ್ತ ಎಸೆದರು.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕಪ್ಪು ಸ್ಕಾರ್ಫ್ ಧರಿಸಿದ್ದು, ಪಕ್ಷದ ಕೆಲವು ಸಂಸದರು ಕಪ್ಪು ಶರ್ಟ್ ಧರಿಸಿ ಬಂದಿದ್ದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಕೂಡ ಕಪ್ಪು ಕುರ್ತಾ ಧರಿಸಿದ್ದರು. 

'ನಾನು ಸದನವನ್ನು ಘನತೆಯಿಂದ ನಡೆಸಲು ಬಯಸುತ್ತೇನೆ' ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಬಳಿಕ, ಕಲಾಪವನ್ನು ಸಂಜೆ 4 ಗಂಟೆಗೆ ಮುಂದೂಡಿದರು.

ರಾಜ್ಯಸಭೆಯೂ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಸಭಾಪತಿ ಜಗದೀಪ್ ಧನಕರ್ ಅವರು ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೂ ಮುಂಚೆಯೇ ಕಪ್ಪು ಬಟ್ಟೆಗಳನ್ನು ಧರಿಸಿದ್ದ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

ಪರಿಸ್ಥಿತಿಯನ್ನು ಗ್ರಹಿಸಿದ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ವಿರೋಧ ಪಕ್ಷದ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯ ಸಂಕೇತವಾಗಿ ಕಲಾಪಕ್ಕೆ ಬಂದಿದ್ದರು.

'ಮೋದಿ-ಅದಾನಿ ಭಾಯ್, ಭಾಯ್,' ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಘೋಷಣೆ ಕೂಗಿದರು.
ಅದಾನಿ ಗ್ರೂಪ್ ವಿರುದ್ಧ ಕಾರ್ಪೊರೇಟ್ ವಂಚನೆ ಮತ್ತು ಸ್ಟಾಕ್ ಬೆಲೆ ಮ್ಯಾನಿಪುಲೇಷನ್ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒತ್ತಾಯಿಸಿ ಅವರು ಘೋಷಣೆಗಳನ್ನು ಕೂಗಿದರು.
ಕಪ್ಪು ಬಟ್ಟೆ ಧರಿಸಲು ನಿರ್ಧಾರ

ಕಾಂಗ್ರೆಸ್ ಲೋಕಸಭೆಯ ನಾಯಕ ಅಧೀರ್ ರಂಜನ್ ಚೌಧರಿ ಅವರು ಆಡಳಿತ ಪಕ್ಷಕ್ಕೆ ಪ್ರಬಲ ಸಂದೇಶವನ್ನು ರವಾನಿಸಲು ಸಂಸದರಿಗೆ ಕಪ್ಪು ಬಟ್ಟೆ ಧರಿಸುವಂತೆ ಸಂದೇಶವನ್ನು ರವಾನಿಸಿದ್ದರು. ನಮ್ಮ ಎಲ್ಲಾ ಸಂಸದರು ಮಾರ್ಚ್ 27ರಂದು ಕಪ್ಪು ಬಟ್ಟೆ ಧರಿಸಿ ಬರಬೇಕೆಂದು ನಾವು ಯೋಜಿಸುತ್ತಿದ್ದೇವೆ. ಶಕ್ತಿಯುತ ಸಾಮೂಹಿಕ ಸಂದೇಶವನ್ನು ಕಳುಹಿಸಲು ದಯವಿಟ್ಟು ಹಾಗೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ ಎಂದು ಹೇಳಿದ್ದರು. 

ಭಾನುವಾರ, ಕಾಂಗ್ರೆಸ್ ಒಂದು ದಿನದ ಸಂಕಲ್ಪ ಸತ್ಯಾಗ್ರಹವನ್ನು ನಡೆಸಿತು. ರಾಜಧಾನಿಯ ರಾಜ್‌ಘಾಟ್‌ನ ಹೊರಗೆ, ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯ ಬೇಡಿಕೆಯನ್ನು ಪುನರುಚ್ಚರಿಸಿದರು.

SCROLL FOR NEXT