ಇಂಪಾಲ್: ಮಣಿಪುರ ಹಿಂಸಾಚಾರ ಪೂರ್ವ ಯೋಜಿತ ಎಂದು ಕಾಂಗ್ರೆಸ್ ಆರೋಪಿಸಿದ್ದು, ಶಾಂತಿ ಮತ್ತು ಸಹಜ ಪರಿಸ್ಥಿತಿ ಪುನರ್ ಸ್ಥಾಪಿಸಲು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಕ್ಷಣವೇ ಹೇರಬೇಕೆಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕಾಂಗ್ರೆಸ್ ವಕ್ತಾರ, ಪಕ್ಷದ ರಾಜ್ಯ ಉಸ್ತುವಾರಿ ಭಕ್ತ ಚರಣ್ ದಾಸ್, ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 20 ಲಕ್ಷ ರೂ. ಮತ್ತು ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಬೇಕು ಮತ್ತು ಜನರು ತಮ್ಮ ಮನೆಗೆ ಮರಳಲು ಸುರಕ್ಷಿತ ಸ್ಥಳದ ಅಗತ್ಯವಿದೆ ಎಂದರು.
ಬಿಜೆಪಿ ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಅದು ಹಿಂಸಾಚಾರ ತಡೆಯಲು ಸಾಧ್ಯವಾಗಲಿಲ್ಲ, ಶಸಾಸ್ತ್ರ ಲೂಟಿ ಮಾಡುವುದನ್ನು ತಡೆಯಲು ಅಥವಾ ಅವುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಅಮಾಯಕರನ್ನು ರಕ್ಷಿಸಲು ಮತ್ತು ಪರಿಹಾರ ಶಿಬಿರಗಳಲ್ಲಿ ಇರುವವರಿಗೆ ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: 60 ಸಾವು, 231 ಮಂದಿಗೆ ಗಾಯ, 1700 ಮನೆಗಳಿಗೆ ಬೆಂಕಿ; ಶಾಂತಿ ಸ್ಥಾಪನೆಗಾಗಿ ಸಿಎಂ ಮನವಿ
ಈಗಲೂ ನಡೆಯುತ್ತಿರುವ ಹಿಂಸಾಚಾರ ಘಟನೆ ತಡೆಯಲು ರಾಷ್ಟ್ರಪತಿ ಆಳ್ವಿಕೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ರಾಷ್ಟ್ರಪತಿ ಆಳ್ವಿಕೆ ಇದ್ದರೆ, ನಂತರ ಹೆಚ್ಚಿನ ಹೊಣೆಗಾರಿಕೆ ಇರಲಿದ್ದು, ಇಂತಹ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಬವಿಸಲ್ಲ ಎಂದರು.
ಅಮಿತ್ ಶಾ ಇನ್ನೂ ಮಣಿಪುರಕ್ಕೆ ಭೇಟಿ ನೀಡಿಲ್ಲ, ಪ್ರಧಾನಿ ನರೇಂದ್ರ ಮೋದಿ ಶಾಂತಿ ಕೋರಿ ಒಂದು ಟ್ವೀಟ್ ಕೂಡಾ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.