ದೇಶ

ಪಾಕಿಸ್ತಾನಿ ಹಿಂದೂಗಳನ್ನು ಹೊರಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ: ರಾಜಸ್ಥಾನ ಸಚಿವ ಎಚ್ಚರಿಕೆ!

Vishwanath S

ಜೈಪುರ: ಜೈಸಲ್ಮೇರ್‌ನ ಅಮರಸಾಗರ್ ಪ್ರದೇಶದಲ್ಲಿ ನೆಲೆಸಿರುವ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳ ತಾತ್ಕಾಲಿಕ ವಸತಿಗಳನ್ನು ನೆಲಸಮಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜಸ್ಥಾನ ಸಚಿವ ಪ್ರತಾಪ್ ಖಚರಿಯಾವಾಸ್ ಇಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ, ಜಿಲ್ಲೆಯ ಅಧಿಕಾರಿಗಳು ಸರ್ಕಾರಿ ಭೂಮಿಯಲ್ಲಿ ಅತಿಕ್ರಮವಾಗಿ ನಿರ್ಮಿಸಿದ್ದ 28 ಕಟ್ಟಡಗಳನ್ನು ನೆಲಸಮಗೊಳಿಸಿದ್ದ ನಂತರ ರಾಜಸ್ಥಾನ ಸರ್ಕಾರಕ್ಕೆ ಹಿನ್ನಡೆ ಉಂಟಾಗಿತ್ತು. ಮಂಗಳವಾರ ನಡೆದ ಧ್ವಂಸದಿಂದ 150 ಪಾಕಿಸ್ತಾನಿ ಹಿಂದೂಗಳು ನಿರಾಶ್ರಿತರಾಗಿದ್ದಾರೆ ಎಂದು ಮಾಧ್ಯಮವೊಂದು ಮಾಡಿತ್ತು. ಇನ್ನು ರಾಜಸ್ಥಾನ ಸರ್ಕಾರದ ಆದೇಶದ ಮೇರೆಗೆ ನೆಲಸಮ ಮಾಡಲಾಗಿದೆ ಎಂದು ಆರೋಪಿಸಿ ಪಾಕಿಸ್ತಾನಿ ಹಿಂದೂ ವಲಸಿಗರು ಪ್ರತಿಭಟನೆ ನಡೆಸಿದರು.

ರಾಜಸ್ಥಾನ ಸರ್ಕಾರದ ಕಾನೂನಿನ ಪ್ರಕಾರ, ನೀವು ಯಾರನ್ನಾದರೂ ಪುನರ್ವಸತಿ ಮಾಡದೆ ಹೊರಹಾಕಲು ಸಾಧ್ಯವಿಲ್ಲ, ಇದು ತುಂಬಾ ಗಂಭೀರವಾದ ವಿಷಯವಾಗಿದೆ ಎಂದು ಸಚಿವರು ಹೇಳಿದರು. ಇದೊಂದು ಷಡ್ಯಂತ್ರವಾಗಿದ್ದು, ಸರ್ಕಾರದ ಮಾನಹಾನಿ ಮಾಡಲು ಯತ್ನಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಚರಿಯಾವಾಸ್ ಹೇಳಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದ್ದಾರೆ, ಅವರು ಕ್ರಮ ಎದುರಿಸಬೇಕಾಗುತ್ತದೆ.

ಅಮರಸಾಗರ ಗ್ರಾಮ ಪಂಚಾಯತಿ ಪ್ರದೇಶದಲ್ಲಿ ನೆಲೆಸಿರುವ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳ ತಾತ್ಕಾಲಿಕ ವಸಾಹತುಗಳ ಒತ್ತುವರಿಯನ್ನು ಜಿಲ್ಲಾಡಳಿತ ಮಂಗಳವಾರ ನೆಲಸಮಗೊಳಿಸಿತ್ತು. ಜೈಸಲ್ಮೇರ್‌ನಲ್ಲಿ ನೆಲೆಸಿರುವ ಪಾಕಿಸ್ತಾನಿ ಹಿಂದೂ ವಲಸಿಗರು ರಾಜಸ್ಥಾನ ಸರ್ಕಾರವು ಪಾಕಿಸ್ತಾನಿ ಹಿಂದೂ ವಲಸಿಗರನ್ನು ಸರ್ಕಾರಿ ಭೂಮಿಯಿಂದ ಹೊರಹಾಕಲು ಆದೇಶಿಸಿದೆ ಎಂದು ಆರೋಪಿಸಿದ್ದಾರೆ.

ಈ ಪ್ರದೇಶದಿಂದ ಪಾಕಿಸ್ತಾನಿ ಹಿಂದೂ ವಲಸಿಗರನ್ನು ಹೊರಹಾಕುವ ಕುರಿತು ಮಾತನಾಡಿದ ಜೈಸಲ್ಮೇರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಟೀನಾ ದಾಬಿ, ನಾವು ಏಪ್ರಿಲ್ 5ರಂದೇ ಸುತ್ತೋಲೆ ಹೊರಡಿಸಿದ್ದೇವೆ ಎಂದು ಹೇಳಿದರು. ನಾವು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೆವು, ಆದರೆ ಅನೇಕರು ಒಪ್ಪಲಿಲ್ಲ. ಅವರು ಉಳಿದುಕೊಂಡಿದ್ದ ಸ್ಥಳವನ್ನು ಈಗಾಗಲೇ ಇತರರಿಗೆ ಹಂಚಿಕೆ ಮಾಡಲಾಗಿದೆ. ಆದಾಗ್ಯೂ, ವಲಸಿಗರಿಗೆ ಸರಿಯಾದ ಭೂಮಿ ಮಂಜೂರು ಮಾಡುವವರೆಗೆ ಆಶ್ರಯ ಮನೆಗಳಿಗೆ ಕರೆದೊಯ್ಯಲಾಗುವುದು ಎಂದು ಅವರು ಹೇಳಿದರು.

ಪೌರತ್ವ ಪಡೆದವರಿಗೆ ಭೂಮಿ ಮಂಜೂರು ಮಾಡಲಾಗುವುದು ಎಂದು ದಾಬಿ ಹೇಳಿದರು. ನಿನ್ನೆ ತೆಗೆದಿರುವ ಅತಿಕ್ರಮಣಗಳನ್ನು ಕಳೆದ 10 ದಿನಗಳಲ್ಲಿ ಮಾತ್ರ ಮಾಡಲಾಗಿದ್ದು ಎಂದು ಹೇಳಿದರು.

SCROLL FOR NEXT