ಭೋಪಾಲ್: ಬಿರುಗಾಳಿಗೆ ಉಜ್ಜೈನ್ ನಲ್ಲಿನ ಮಹಾಕಾಲ್ ಲೋಕ್ ಕಾರಿಡಾರ್ ನಲ್ಲಿರುವ ಕೆಲವು ವಿಗ್ರಹಗಳು ಹಾನಿಗೊಳಗಾಗಿರುವುದರ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶಿಸಿದ್ದಾರೆ.
ಸಂಜೆ 4 ಗಂಟೆ ವೇಳೆಗೆ ಬೀಸಿದ ಬಿರುಗಾಳಿಗೆ ಮಹಾಕಾಲೇಶ್ವರ್ ದೇವಾಲಯದ ಆವರಣದಲ್ಲಿ ಸಪ್ತರ್ಷಿಗಳ ವಿಗ್ರಹಗಳ ಪೈಕಿ 6 ವಿಗ್ರಹಗಳು ಧರೆಗೆ ಉರುಳಿವೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಆಚರಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚೌಹಾಣ್ ಸುದ್ದಿಗಾರರೊಂದಿಗೆ ಮಾತನಾಡಿ, "ನಾನು ಈ ವಿಗ್ರಹಗಳಿಗೆ ಹಾನಿಯುಂಟಾದ ವಿಷಯದ ಬಗ್ಗೆ ಮಾಹಿತಿ ಪಡೆದಿದ್ದೇನೆ ಮತ್ತು ವರದಿಯನ್ನು ಕೇಳಿದ್ದೇನೆ" ಎಂದು ಹೇಳಿದರು.
ಹಾನಿಗೊಳಗಾದ ವಿಗ್ರಹಗಳು ಫೈಬರ್ನಿಂದ ಮಾಡಲ್ಪಟ್ಟಿದೆ, ಅಂತಹ ಸ್ಥಳಗಳಲ್ಲಿ ಭಾರವಾದ ಕಲ್ಲಿನ ಆಕೃತಿಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕಾಲ್ ಲೋಕ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದ್ದರು.