ನಾರಾಯಣಪುರ: ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶನಿವಾರ ಭಾರತೀಯ ಜನತಾ ಪಕ್ಷದ ನಾಯಕನನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 7 ಮತ್ತು 17 ರಂದು ನಡೆಯಲಿರುವ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನಾರಾಯಣಪುರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮತ್ತು ಕ್ಷೇತ್ರದ ವಿಧಾನಸಭಾ ಸಂಚಾಲಕ ರತನ್ ದುಬೆ ಅವರನ್ನು ಕೌಶಲನಗರ ಗ್ರಾಮದ ಮಾರುಕಟ್ಟೆಯಲ್ಲಿ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಛತ್ತೀಸ್ ಗಢ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ. ಸೇರಿ ಹಲವು ಭರವಸೆ
ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು, ಹಂತಕರನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಬಿಜೆಪಿ ನಾಯಕ ಓಂ ಮಾಥುರ್, ಛತ್ತೀಸ್ಗಢ ಬಿಜೆಪಿಯ ನಾರಾಯಣಪುರ ವಿಧಾನಸಭಾ ಕ್ಷೇತ್ರದ ಸಂಚಾಲಕ ಮತ್ತು ನಾರಾಯಣಪುರ ಜಿಲ್ಲಾ ಉಪಾಧ್ಯಕ್ಷ ರತನ್ ದುಬೆ ಅವರನ್ನು ಪ್ರಚಾರದ ವೇಳೆ ನಕ್ಸಲೀಯರು ಬರ್ಬರವಾಗಿ ಹತ್ಯೆಗೈದಿರುವುದು ನನಗೆ ಅತೀವ ದುಃಖ ತಂದಿದೆ. ಈ ಹೇಡಿತನವನ್ನು ಪಕ್ಷ ಖಂಡಿಸುತ್ತದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಕ್ಟೋಬರ್ 20 ರಂದು ಮೊಹ್ಲಾ-ಮನ್ಪುರ್-ಅಂಬಗಢ್ ಚೌಕಿ ಜಿಲ್ಲೆಯ ಸರ್ಖೇಡಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಬಿರ್ಜು ತಾರಾಮ್ ಅವರನ್ನು ಶಂಕಿತ ಮಾವೋವಾದಿಗಳು ಗುಂಡಿಕ್ಕಿ ಕೊಂದಿದ್ದರು.