ದೇಶ

ಸಿಕ್ಕಿಂ ಪ್ರವಾಹ: ನಾಪತ್ತೆಯಾದ 142 ಜನರಿಗಾಗಿ ಶೋಧ ಕಾರ್ಯ ಮುಂದುವರಿಕೆ, 26 ವಿದ್ಯಾರ್ಥಿಗಳ ಸ್ಥಳಾಂತರ!

Nagaraja AB

ಶಿಲ್ಲಾಂಗ್: ಸಿಕ್ಕಿಂನಲ್ಲಿ ಹಠಾತ್ ಮೇಘಸ್ಫೋಟದಿಂದ ಉಂಟಾದ ತೀಸ್ತಾ ನದಿಯ ಪ್ರವಾಹದಲ್ಲಿ ನಾಪತ್ತೆಯಾಗಿರುವ 142 ಜನರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದಾಗಿ ಏಳು ಸೈನಿಕರು ಸೇರಿದಂತೆ 26 ಜನರು ಸಾವನ್ನಪ್ಪಿದ್ದಾರೆ.  25,000 ಕ್ಕೂ ಹೆಚ್ಚು ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದು, 1,200 ಕ್ಕೂ ಹೆಚ್ಚು ಮನೆಗಳನ್ನು ಹಾನಿಯಾಗಿದೆ. 13 ಸೇತುವೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. 

ಇಲ್ಲಿಯವರೆಗೂ ವಿವಿಧ ಪ್ರದೇಶಗಳಿಂದ 2,413 ಜನರನ್ನು ರಕ್ಷಿಸಲಾಗಿದೆ ಮತ್ತು ರಾಜ್ಯಾದ್ಯಂತ ತೆರೆಯಲಾದ 22 ಪರಿಹಾರ ಶಿಬಿರಗಳಲ್ಲಿ 6,875 ಜನರು ಆಶ್ರಯ ಪಡೆಯುತ್ತಿದ್ದಾರೆ, ಅದರಲ್ಲಿ ಹೆಚ್ಚಿನವರು ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದ್ದಾರೆ. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಮೃತರ ಕುಟುಂಬಗಳಿಗೆ  4 ಲಕ್ಷ ರೂ. ಪರಿಹಾರ ಮತ್ತು ಶಿಬಿರಗಳಲ್ಲಿ ಆಶ್ರಯ ಪಡೆದ ಎಲ್ಲರಿಗೂ ತಲಾ ರೂ 2,000 ತಕ್ಷಣದ ಪರಿಹಾರವನ್ನು ಘೋಷಿಸಿದ್ದಾರೆ. 

ಪ್ರವಾಹದಿಂದಾಗಿ ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ಹಾನಿಯ ಬಗ್ಗೆ ನಿಖರವಾದ ವಿವರ ನೀಡಲು ಸಾಧ್ಯವಿಲ್ಲ. ಸಮಿತಿ ರಚಿಸಿ ಅದರ ವಿಶ್ಲೇಷಣೆ ಪೂರ್ಣಗೊಂಡ ನಂತರ ಅದು ಬಹಿರಂಗವಾಗಲಿದೆ. ನಮ್ಮ ಮೊದಲ ಆದ್ಯತೆಯು ಸಂಕಷ್ಟದಲ್ಲಿರುವವರನ್ನು ಉಳಿಸುವುದು ಮತ್ತು ಅವರಿಗೆ ತಕ್ಷಣದ ಪರಿಹಾರವನ್ನು ಒದಗಿಸುವುದು ಮೊದಲ ಆದ್ಯತೆಯಾಗಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. 

"ಜಿಲ್ಲೆಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸೇತುವೆಗಳು ಕೊಚ್ಚಿಹೋಗಿವೆ. ಉತ್ತರ ಸಿಕ್ಕಿಂನಲ್ಲಿ ಸಂವಹನಕ್ಕೆ ತೀವ್ರ ತೊಂದರೆಯಾಗಿದೆ. ಬರ್ದಂಗ್‌ನಿಂದ ನಾಪತ್ತೆಯಾಗಿದ್ದ 23 ಸೇನಾ ಸಿಬ್ಬಂದಿಗಳಲ್ಲಿ ಏಳು ಮಂದಿಯ ಮೃತದೇಹಗಳನ್ನು ತೀಸ್ತಾದ ಕೆಳಗಿರುವ ವಿವಿಧ ಪ್ರದೇಶಗಳಿಂದ ವಶಪಡಿಸಿಕೊಳ್ಳಲಾಗಿದೆ.  ಸಿಕ್ಕಿಂ ಮತ್ತು ತೀಸ್ತಾ ಹರಿಯುವ ಪಶ್ಚಿಮ ಬಂಗಾಳದ ಉತ್ತರ ಭಾಗಗಳಲ್ಲಿ ಕಾಣೆಯಾದ ಉಳಿದ ಯೋಧರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮೇಘಾಲಯದ 26 ವಿದ್ಯಾರ್ಥಿಗಳ ಸ್ಥಳಾಂತರ: ಹಠಾತ್ ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಸಿಲುಕಿರುವ ಮೇಘಾಲಯದ 26 ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಮತ್ತು ಅವರು ಶಿಲ್ಲಾಂಗ್‌ಗೆ ತೆರಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.
 

SCROLL FOR NEXT