ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 
ದೇಶ

ಚೀನಾ ಕುರಿತ ಪ್ರಧಾನಿ ಮೋದಿ ಹೇಳಿಕೆ 'ದುರ್ಬಲ, ನಿಷ್ಪರಿಣಾಮಕಾರಿ': ಕಾಂಗ್ರೆಸ್

Srinivas Rao BV

ನವದೆಹಲಿ: ಚೀನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಗಡಿಯನ್ನು ಅತಿಕ್ರಮಣ ಮಾಡುತ್ತಿರುವ ಚೀನಾಗೆ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಅತ್ಯಂತ ದುರ್ಬಲವಾದದ್ದು ಹಾಗೂ ಪರಿಣಾಮಕಾರಿತ್ವ ಇಲ್ಲದ್ದು ಎಂದು ಕಾಂಗ್ರೆಸ್ ಹೇಳಿದೆ.

ಇದೇ ವೇಳೆ, ಭಾರತದ ನೆಲವನ್ನು ಯಾರೂ ಅತಿಕ್ರಮಣ ಮಾಡಿಲ್ಲ, ಯಾವುದೇ ಜಾಗವನ್ನೂ ವಶಪಡಿಸಿಕೊಂಡಿಲ್ಲ ಎಂದು 2020 ರ ಜೂನ್ ನಲ್ಲಿ ನೀಡಿದ್ದ ಹೇಳಿಕೆಗೆ 140 ಕೋಟಿ ಭಾರತೀಯರಲ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.

ಅಮೇರಿಕಾದ ನ್ಯೂಸ್ ವೀಕ್ ನಿಯತಕಾಲಿಕೆಗೆ ಪ್ರಧಾನಿ ಮೋದಿ ಸಂದರ್ಶನ ನೀಡಿದ್ದು, ಇದರಲ್ಲಿ ಚೀನಾ-ಭಾರತ ಗಡಿ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

ನ್ಯೂಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಅತ್ಯಂತ ದುರ್ಬಲವಾಗಿ, ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

ಭಾರತದ ಸಾರ್ವಭೌಮತ್ವದ ಮೇಲೆ ಚೀನಾ ಪದೇ ಪದೇ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಪ್ರಧಾನಿಯವರ ಏಕೈಕ ಹೇಳಿಕೆ ಎಂದರೆ ಅದು ದ್ವಿಪಕ್ಷೀಯ ಸಂವಾದಗಳಲ್ಲಿನ "ಅಸಹಜತೆ" ಯನ್ನು ಪರಿಹರಿಸಲು ಭಾರತ-ಚೀನಾ ಗಡಿ ಪರಿಸ್ಥಿತಿಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ ಎಂಬುದಾಗಿದೆ.

"ಚೀನಾಕ್ಕೆ ಪ್ರಬಲ ಸಂದೇಶವನ್ನು ಕಳುಹಿಸಲು ಪ್ರಧಾನಿಗೆ ಅವಕಾಶವಿತ್ತು. ಆದಾಗ್ಯೂ, ಅವರ ನಿಷ್ಪರಿಣಾಮಕಾರಿ ಮತ್ತು ದುರ್ಬಲ ಪ್ರತಿಕ್ರಿಯೆ ಭಾರತದ ಭೂಪ್ರದೇಶದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುವಲ್ಲಿ ಚೀನಾವನ್ನು ಮತ್ತಷ್ಟು ಉತ್ತೇಜಿಸುವ ಸಾಧ್ಯತೆಯಿದೆ" ಎಂದು ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

"ಚೀನಾ ವಿಷಯದ ಬಗ್ಗೆ ಪ್ರಧಾನಿಯವರ ಪ್ರತಿಕ್ರಿಯೆ ಅವಮಾನಕರ ಮಾತ್ರವಲ್ಲ, ನಮ್ಮ ಗಡಿಗಳನ್ನು ರಕ್ಷಿಸುವಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ನಮ್ಮ ಹುತಾತ್ಮರಿಗೆ ಅಗೌರವಕಾರಿಯಾಗಿದೆ" ಎಂದೂ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

SCROLL FOR NEXT