ಕೆ ಕವಿತಾ
ಕೆ ಕವಿತಾ 
ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಕೆ ಕವಿತಾ ಕಸ್ಟಡಿಗೆ ಕೋರಿ ಸಿಬಿಐ ಅರ್ಜಿ; ಆದೇಶ ಕಾಯ್ದಿರಿಸಿದ ಕೋರ್ಟ್

Ramyashree GN

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧಿತರಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರನ್ನು ಐದು ದಿನಗಳ ಕಸ್ಟಡಿಗೆ ಕೋರಿ ಸಿಬಿಐ ಅರ್ಜಿ ಸಲ್ಲಿಸಿದ್ದು, ತೀರ್ಪನ್ನು ಇಲ್ಲಿನ ನ್ಯಾಯಾಲಯ ಶುಕ್ರವಾರ ಕಾಯ್ದಿರಿಸಿದೆ.

ಇ.ಡಿ ಬಂಧನದ ನಂತರ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕವಿತಾ ಅವರನ್ನು ಗುರುವಾರ ಬಂಧಿಸಿತ್ತು.

ಸಿಬಿಐ ಹಾಗೂ ಕವಿತಾ ಪರ ವಾದ ಮಂಡಿಸಿದ ವಕೀಲರ ವಾದ ಆಲಿಸಿದ ಬಳಿಕ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಆದೇಶವನ್ನು ಕಾಯ್ದಿರಿಸಿದರು.

ಕವಿತಾ ಅವರು ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಪ್ರಶ್ನೆಗೆ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಕವಿತಾ ಪರ ವಕೀಲರಾದ ನಿತೇಶ್ ರಾಣಾ ಅವರು ಸಿಬಿಐ ಮನವಿಯನ್ನು ವಿರೋಧಿಸಿ, ಬಂಧನವನ್ನು ಕಾನೂನುಬಾಹಿರ ಎಂದರು ಮತ್ತು ತನಿಖಾ ಸಂಸ್ಥೆಯು ಕವಿತಾ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.

ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಕವಿತಾ ಅವರನ್ನು ತಿಹಾರ್ ಜೈಲಿನೊಳಗೆ ವಿಚಾರಣೆ ನಡೆಸಿದ್ದರು.

ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಇ.ಡಿ ಕವಿತಾ (46) ಅವರನ್ನು ಬಂಧಿಸಿತ್ತು.

SCROLL FOR NEXT