ನವದೆಹಲಿ: ಒಲಿಂಪಿಕ್ಸ್ 2024 ರ ಕುಸ್ತಿ ಫೈನಲ್ ನಿಂದ ತೂಕ ಹೆಚ್ಚಳದ ಕಾರಣ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಅಥವಾ ರಾಜ್ಯಸಭಾ ಸದಸ್ಯತ್ವ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.
ಒಲಿಂಪಿಕ್ಸ್ ನಲ್ಲಿ ಆಕೆಯ ಕುಸ್ತಿ ಪ್ರದರ್ಶನವನ್ನು ಪರಿಗಣಿಸಿ ಆಕೆಗೆ ಭಾರತ ರತ್ನ ನೀಡಬೇಕು ಎಂದು ಟಿಎಂಸಿ ಹೇಳಿದೆ.
ವಿನೇಶ್ ಫೋಗಟ್ ಅನರ್ಹಗೊಂಡಿರುವುದಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಕ್ರಿಯಿಸಿ, ದುರದೃಷ್ಟಕರ ಎಂದು ಹೇಳಿದ್ದರು ಅಷ್ಟೇ ಅಲ್ಲದೇ ಭಾರತದ 1.4 ಬಿಲಿಯನ್ ಜನತೆಗೆ ಆಕೆ ಚಾಂಪಿನ್ ಗಳ ಚಾಂಪಿಯನ್ ಹಾಗೂ ದೇಶದ ಹೆಮ್ಮೆ ಎಂದು ಹೇಳಿದ್ದರು.
ಸರ್ಕಾರ ಹಾಗೂ ವಿಪಕ್ಷಗಳು ಒಗ್ಗೂಡಿ ವಿನೇಶ್ ಗೆ ಭಾರತ ರತ್ನ ಅಥವಾ ರಾಷ್ಟ್ರಪತಿಗಳ ಮೂಲಕ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಬಗ್ಗೆ ನಿರ್ಧರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.
ಆಕೆ ಎದುರಿಸಿದ ಅಪಾರ ಹೋರಾಟವನ್ನು ಪರಿಗಣಿಸಿ ನಾವು ಆಕೆಗೆ ಕನಿಷ್ಠ ಇಷ್ಟನ್ನು ಮಾಡಬಹುದು. ಯಾವುದೇ ಪದಕವು ಆಕೆಯ ನಿಜವಾದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ" ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತದ ಮಾಜಿ ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಫೋಗಟ್ ಪಾತ್ರದ ವೀಡಿಯೊವನ್ನು ಟಿಎಂಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.