ಅಮಿತ್ ಶಾ ಸುದ್ದಿಗೋಷ್ಠಿ 
ದೇಶ

Ambedkar: 'ಕಾಂಗ್ರೆಸ್ ನನ್ನ ಹೇಳಿಕೆ ತಿರುಚಿದೆ.. ಕನಸಿನಲ್ಲಿಯೂ ಅವರನ್ನು ಅವಮಾನಿಸಲು ಸಾಧ್ಯವಿಲ್ಲದ ಪಕ್ಷದಿಂದ ಬಂದಿದ್ದೇನೆ'- Amit Shah

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ನಾನು ರಾಜೀನಾಮೆ ನೀಡಿದರೂ ಅವರ ಸಮಸ್ಯೆಗಳು ಮುಗಿಯುವುದಿಲ್ಲ. ಕಾಂಗ್ರೆಸ್ ಕನಿಷ್ಠ 15 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು.

ನವದೆಹಲಿ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾನು ಕನಸಿನಲ್ಲಿಯೂ ಅವಮಾನಿಸಲು ಸಾಧ್ಯವಿಲ್ಲದ ಪಕ್ಷದಿಂದ ಬಂದವನಾಗಿದ್ದು, ಕಾಂಗ್ರೆಸ್ ನನ್ನ ಹೇಳಿಕೆ ತಿರುಚಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದು, 'ಕಾಂಗ್ರೆಸ್​​ ಅವರು 'ಸತ್ಯವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಸಂವಿಧಾನ ವಿರೋಧಿ ಪಕ್ಷವು ತನ್ನ ಹೇಳಿಕೆಗಳನ್ನು ತಪ್ಪಾಗಿ ಪ್ರಸ್ತುತ ಪಡಿಸುತ್ತಿದ್ದು, ಸಮಾಜದಲ್ಲಿ ತನ್ನ ವಿರುದ್ದ ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ' ಎಂದು ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ವಿರೋಧ ಪಕ್ಷ ಕಾಂಗ್ರೆಸ್ ಸಂಸತ್ತಿನಲ್ಲಿ ನನ್ನ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸುತ್ತಿದ್ದು, ಅದು ಅಂಬೇಡ್ಕರ್ ವಿರೋಧಿ ನಿಲುವನ್ನು ಅಳವಡಿಸಿಕೊಂಡಿದೆ. ನನ್ನ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗುತ್ತಿದ್ದು, ಕಾಂಗ್ರೆಸ್ ನಕಲಿ ಸುದ್ದಿಗಳನ್ನು ಹರಡುತ್ತಿದೆ. ನಾನು ಅಂಬೇಡ್ಕರ್ ಅವರ ವಿರುದ್ಧ ಎಂದಿಗೂ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್​ಗೆ ಅಂಬೇಡ್ಕರ್ ಮೇಲೆ ದ್ವೇಷ

ಬಾಬಾ ಸಾಹೇಬರನ್ನು ಕಾಂಗ್ರೆಸ್ ದ್ವೇಷಿಸುತ್ತಿದೆ ಎಂದು ಆರೋಪಿಸಿದ ಅಮಿತ್​​ ಶಾ, 'ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಬೇಕೆಂದೇ ವಿಳಂಬ ಧೋರಣೆ ಅನುಸರಿಸಿದ್ದು, ಆ ಪಕ್ಷವು ತನ್ನ ನಾಯಕರಿಗೆ ಹಲವು ಬಾರಿ ಭಾರತ ರತ್ನ ನೀಡಿದೆ. ಆದರೆ ಬಾಬಾ ಸಾಹೇಬರಿಗೆ ನೀಡಿಲ್ಲ. 1955ರಲ್ಲಿ ನೆಹರೂ ಅವರಿಗೆ ಭಾರತ ರತ್ನ ನೀಡಿತ್ತು. 1971ರಲ್ಲಿ ಇಂದಿರಾ ಭಾರತ ರತ್ನ ಪಡೆದರು.

ಆದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗ ಮತ್ತು ಭಾರತೀಯ ಜನತಾ ಪಕ್ಷದ ಬೆಂಬಲದ ಸರ್ಕಾರ ಇದ್ದಾಗ ಅಂದರೆ 1990ರ ವರೆಗೂ ಬಾಬಾ ಸಾಹೇಬರಿಗೆ ಭಾರತ ರತ್ನ ಸಿಕ್ಕಿರಲಿಲ್ಲ, ಇದು ಅಂಬೇಡ್ಕರರ ಬಗೆಗಿನ ನೆಹರೂ ಮತ್ತು ಕಾಂಗ್ರೆಸ್​ ಪಕ್ಷದ ದ್ವೇಷವನ್ನು ಪ್ರಸ್ತುತ ಪಡಿಸುತ್ತದೆ ಎಂದರು.

ಕಾಂಗ್ರೆಸ್ ಹೇಳಿಕೆ ತಿರುಚುತ್ತಿದೆ

ಅಂತೆಯೇ ಕಾಂಗ್ರೆಸ್ ಪಕ್ಷವು ತನ್ನ ಹೇಳಿಕೆ ಸತ್ಯವನ್ನು ತಿರುಚಿದ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದೆ ಎಂದು ಆರೋಪಿಸಿದ ಶಾ, 'ನಾನು ಅದನ್ನು ಖಂಡಿಸುತ್ತೇನೆ… ಕಾಂಗ್ರೆಸ್ ಪಕ್ಷ ಡಾ.ಬಿ.ಆರ್. ಅಂಬೇಡ್ಕರ್ ವಿರೋಧಿಯಾಗಿದ್ದು, ಅವರ ನೀತಿಗಳು ಮೀಸಲಾತಿ ಮತ್ತು ಸಂವಿಧಾನದ ವಿರುದ್ಧವಾಗಿದೆ. ಕಾಂಗ್ರೆಸ್ ಕೂಡ ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದು, ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಎಲ್ಲಾ ಸಾಂವಿಧಾನಿಕ ಮೌಲ್ಯಗಳನ್ನು ಕಾಂಗ್ರೆಸ್ ನಾಯಕರು​ ಉಲ್ಲಂಘಿಸಿದ್ದಾರೆ. ಈ ಹಿಂದೆ ಅವರು ಪ್ರಧಾನಿ ಮೋದಿಯವರ ಎಡಿಟ್ ಮಾಡಿದ ಹೇಳಿಕೆಗಳನ್ನು ಸಾರ್ವಜನಿಕಗೊಳಿಸಿದ್ದರು ಮತ್ತು ಈಗ ಅವರ ಪಕ್ಷವು ನನ್ನ ಹೇಳಿಕೆಯನ್ನು “ವಿಕೃತ ರೀತಿಯಲ್ಲಿ” ಪ್ರಸ್ತುತಪಡಿಸುತ್ತಿದೆ ಎಂದರು.

ಕನಸಿನಲ್ಲಿಯೂ ಅವರನ್ನು ಅವಮಾನಿಸಲು ಸಾಧ್ಯವಿಲ್ಲದ ಪಕ್ಷದಿಂದ ಬಂದಿದ್ದೇನೆ

ನನ್ನ ಸಂಪೂರ್ಣ ಹೇಳಿಕೆಯನ್ನು ಸಾರ್ವಜನಿಕರ ಮುಂದೆ ಇಡುವಂತೆ ನಾನು ಮಾಧ್ಯಮಗಳಲ್ಲಿ ವಿನಂತಿಸುತ್ತೇನೆ ಎಂದ ಅಮಿತ್ ಶಾ, 'ಅಂಬೇಡ್ಕರ್ ಜೀ ಅವರನ್ನು ಕನಸಿನಲ್ಲೂ ಅವಮಾನಿಸದ ಪಕ್ಷಕ್ಕೆ ನಾನು ಸೇರಿದ್ದೇನೆ. ಬಿಜೆಪಿ ಅಂಬೇಡ್ಕರ್ ಅವರ ಬಗ್ಗೆ ಅಪಾರ ಪ್ರೀತಿ ಹೊಂದಿದೆ. ಅಂತಹ ಪಕ್ಷದಿಂದ ಬಂದ ನಾನು ಅವರನ್ನು ಅಪಮಾನಿಸಲು ಸಾಧ್ಯವೇ ಇಲ್ಲ. ಭಾರತೀಯ ಜನತಾ ಪಕ್ಷವು ಯಾವಾಗಲೂ ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದೆ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲ ನಾವು ಅಂಬೇಡ್ಕರ್ ಅವರ ತತ್ವಗಳನ್ನು ಪ್ರಚಾರ ಮಾಡಿದ್ದೇವೆ. ಭಾರತೀಯ ಜನತಾ ಪಕ್ಷವು ಮೀಸಲಾತಿಯನ್ನು ಬಲಪಡಿಸಲು ಕೆಲಸ ಮಾಡಿದೆ ಎಂದರು.

ಅಂತೆಯೇ 'ಕಾಂಗ್ರೆಸ್ ಸರ್ಕಾರಗಳು ಎಂದಿಗೂ ಅಂಬೇಡ್ಕರ್ ಸ್ಮಾರಕವನ್ನು ನಿರ್ಮಿಸಲಿಲ್ಲ. ಅವರೊಂದಿಗೆ ಸಂಬಂಧಿಸಿದ ಹಲವಾರು ತಾಣಗಳನ್ನು ಅಭಿವೃದ್ಧಿಪಡಿಸಿದ್ದು ಬಿಜೆಪಿ, ಮತ್ತು ಅವರ ಪರಂಪರೆಯನ್ನು ಗೌರವಿಸಲು ಸಂವಿಧಾನ ದಿನವನ್ನು ಘೋಷಿಸಿದ್ದು ಮೋದಿ ಸರ್ಕಾರ' ಎಂದು ಹೇಳಿದರು.

ಖರ್ಗೆ 15 ವರ್ಷ ಅಲ್ಲೇ ಕೂರಬೇಕು

ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ನಾನು ರಾಜೀನಾಮೆ ನೀಡಿದರೂ ಅವರ ಸಮಸ್ಯೆಗಳು ಮುಗಿಯುವುದಿಲ್ಲ. ನಿಮಗೆ ಸಂತೋಷವನ್ನು ನೀಡಿದರೆ ರಾಜೀನಾಮೆ ನೀಡುತ್ತೇನೆ. ಆದರೆ ಈಗ ಅವರು ಕನಿಷ್ಠ 15 ವರ್ಷಗಳ ಕಾಲ ಕಾಯಬೇಕಾಗಿದೆ. ಕಾಂಗ್ರೆಸ್ ಕನಿಷ್ಠ 15 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಖರ್ಗೆಯವರ ಸಂತೋಷಕ್ಕಾಗಿ ನಾನು ರಾಜೀನಾಮೆ ನೀಡಬೇಕು, ಆದರೆ ನನ್ನ ರಾಜೀನಾಮೆಯಿಂದ ಖರ್ಗೆಯವರ ಹಿತವನ್ನು ಹಾಳು ಮಾಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. 15 ವರ್ಷ ಖರ್ಗೆ ಎಲ್ಲಿ ಕುಳಿತಿದ್ದಾರೋ ಅಲ್ಲಿಯೇ ಕುಳಿತುಕೊಳ್ಳಬೇಕು ಎಂದು ಅಮಿತ್ ಶಾ ಕಿಡಿಕಾರಿದರು.

ಕ್ಷಮೆ ಮತ್ತು ರಾಜಿನಾಮೆಗೆ ವಿಪಕ್ಷಗಳ ಪಟ್ಟು

ಡಾ.ಬಿ.ಆರ್. ಅಂಬೇಡ್ಕರ್ ಅವರ ಹೇಳಿಕೆಗೆ ವಿರೋಧ ಪಕ್ಷದ ಸದಸ್ಯರು ಭಾರಿ ಕೋಲಾಹಲವನ್ನು ಸೃಷ್ಟಿಸಿದ ನಂತರ ಕೇಂದ್ರ ಸಚಿವರ ಈ ಹೇಳಿಕೆ ಹೊರಬಿದ್ದಿದೆ ಮತ್ತು ಅಂಬೇಡ್ಕರ್ ಅವರಿಂದ ಕ್ಷಮೆಯಾಚಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿ, ಶಾ ಅವರ ಹೇಳಿಕೆಯು ಬಿಆರ್ ಅಂಬೇಡ್ಕರ್ ಅವರಿಗೆ ಅವಮಾನವಾಗಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ಪಕ್ಷವು ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದೆ. ಏತನ್ಮಧ್ಯೆ, ಸಂಸತ್ತಿನಲ್ಲಿ ಅಂಬೇಡ್ಕರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರೇನ್ ಬುಧವಾರ ಅಮಿತ್ ಶಾ ವಿರುದ್ಧ ವಿಶೇಷ ಹಕ್ಕು ಮಂಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ

ಮದ್ದೂರಿನಲ್ಲಿ ಕಲ್ಲು ತೂರಾಟ: ಲೈಟ್ ಆಫ್ ಮಾಡಿರುವುದು ಅನುಮಾನ ಮೂಡಿಸುತ್ತಿದೆ - IGP

ಮುಂದಿನ ಜನ್ಮದಲ್ಲಿ 'ಮುಸ್ಲಿಂ' ಆಗಿ ಹುಟ್ಟುವ ಆಸೆ: ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ವಿರುದ್ಧ ಬಿಜೆಪಿ ಕಿಡಿ! Video

ಆಗ KGF, ಈಗ ಕಾಂತಾರ ಚಾಪ್ಟರ್ 1: ಮತ್ತೆ ಕನ್ನಡ ಚಿತ್ರದ ಕೇರಳ ವಿತರಣೆ ಹಕ್ಕು ಪಡೆದ Actor Prithviraj Sukumaran

Trade Agreement: ಇಸ್ರೇಲ್‌ನೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ, 'ನರಹಂತಕ ಸರ್ಕಾರ' ಬೆಂಬಲಿಸುವುದು ರಾಷ್ಟ್ರೀಯ ಹಿತಾಸಕ್ತಿಯಲ್ಲ- ಓವೈಸಿ

SCROLL FOR NEXT