ನವದೆಹಲಿ: ಆಡಳಿತಾರೂಢ-ಎನ್ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಎನ್ಡಿಎ ಎಂದರೆ 'ನೋ ಡೇಟಾ ಅವೈಲೇಬಲ್' ಎಂದು ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ 'ಕನ್ನಡಿಯಲ್ಲಿನ ಗಂಟು' ಎಂದು ಬುಧವಾರ ಆರೋಪಿಸಿದ್ದಾರೆ.
ಸರ್ಕಾರ "ಎಲ್ಲಾ ಯೋಜನೆಗಳ ಬಗ್ಗೆ ಮಾತನಾಡುತ್ತದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆರ್ಥಿಕತೆಯನ್ನು ಪೀಡಿಸುತ್ತಿರುವ ಬಿಕ್ಕಟ್ಟುಗಳನ್ನು ಪರಿಹರಿಸಲು ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತರೂರ್ ಹೇಳಿದ್ದಾರೆ.
"ಈ ಚುನಾವಣೆಯು ಇತರರಿಗೆ ತಮ್ಮ ವಾಕ್ಚಾತುರ್ಯವನ್ನು ತೋರಿಸಲು ಅವಕಾಶ ನೀಡುತ್ತಿದೆ - ಬರೀ ಮಾತನಾಡುವುದು ಮತ್ತು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ದರೆ ಹೇಗೆ? ಕಾನೂನಾತ್ಮಕವಾಗಿ ತೆರಿಗೆ ಹಂಚಿಕೆಯಾಗಲಿ: ಸಿಎಂ ಸಿದ್ದರಾಮಯ್ಯ
"ನಾವು ಅಂಕಿಅಂಶಗಳು ಲಭ್ಯವಿಲ್ಲದ ಕಾಲದಲ್ಲಿ ಇದ್ದೇವೆ ಮತ್ತು ನಮ್ಮ ಬಳಿ ಇರುವುದು ನೀತಿ ಆಯೋಗದ ಬಹುಆಯಾಮದ ಬಡತನ ಸೂಚ್ಯಂಕ ಮಾತ್ರ. ಇದು ಅವರು ರಚಿಸಿದ ಹೊಸ ಸೂಚ್ಯಂಕವಾಗಿದೆ ಮತ್ತು ಇದನ್ನು ಯಾವುದೇ ಹಿಂದಿನ ಬಡತನ ಸಂಖ್ಯೆಗಳೊಂದಿಗೆ ಹೋಲಿಸಲಾಗುವುದಿಲ್ಲ. "ಹಣಕಾಸು ಸಚಿವರು ಹೇಳಿಕೊಳ್ಳುವಂತೆ ಬಡತನವು ನಿಜವಾಗಿಯೂ ಕಡಿಮೆಯಾಗಿದೆಯೇ ಎಂದು ನಿರ್ಣಯಿಸಲು ನಮಗೆ ಯಾವುದೇ ಆಧಾರವಿಲ್ಲ... NDA ಎಂದು ಸ್ಪಷ್ಟವಾಗಿ ಯಾವುದೇ ಡೇಟಾ ಲಭ್ಯವಿಲ್ಲ" ಎಂದರ್ಥ ಎಂದರು.
ಇದೇ ವೇಳೆ ರಾಜ್ಯಗಳಿ ತೆರಿಗೆ ಹಂಚಿಕೆ ವಿಚಾರ ಪ್ರಸ್ತಾಪಿಸಿದ ತರೂರ್, “ರಾಜ್ಯಗಳನ್ನು ಕಡೆಗಣಿಸುವುದು ಸರಿಯಲ್ಲ. ಕೇಂದ್ರೀಕೃತ ಸಹಕಾರಿ ಫೆಡರಲಿಸಂ ವ್ಯವಸ್ಥೆ ಅಡಿಯಲ್ಲಿ ರಾಜ್ಯಗಳು 'ಸಹಕಾರ' ನೀಡಬೇಕು. ಆದರೆ ಕೇಂದ್ರವು ತನಗೆ ಬೇಕಾದಂತೆ 'ಕಾರ್ಯನಿರ್ವಹಿಸುತ್ತಿದೆ', ಕೇಂದ್ರ ಸರ್ಕಾರ ಎಲ್ಲಾ ವಿಚಾರದಲ್ಲೂ ವಿಫಲವಾಗಿದೆ. ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ” ಎಂದು ತರೂರ್ ಕಿಡಿ ಕಾರಿದರು.