ದೇಶ

ಶ್ರೀನಗರದಲ್ಲಿ ಉಗ್ರರಿಂದ ಗುಂಡಿನ ದಾಳಿ: ಇಬ್ಬರು ನಾಗರೀಕರ ಸಾವು

Manjula VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆಂದು ಗುರುವಾರ ತಿಳಿದುಬಂದಿದೆ.

ಶ್ರೀನಗರದ ಶಾಲ್ ಕಡಲ್ ಪ್ರದೇಶದ ಕರ್ಫಾಲಿ ಮೊಹಲ್ಲಾದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪರಿಚಿತ ಉಗ್ರರು ಹತ್ತಿರದಿಂದಲೇ ಗುಂಡು ಹಾರಿಸಿದ್ದು, ಇದರ ಪರಿಣಾಮವಾಗಿ ಅಮೃತಪಾಲ್ ಸಿಂಗ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಲ್ಲದೆ, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಬಳಿಕ ಭದ್ರತಾ ಪಡೆಗಳು ಸ್ಥಳಕ್ಕೆ ದೌಡಾಯಿಸಿ, ಗಾಯಾಳು ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.

ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. ಇದರೊಂದಿಗೆ ಉಗ್ರರ ದಾಳಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ.

'ಶ್ರೀನಗರದ ಶಹೀದ್ ಗುಂಜ್​ನಲ್ಲಿ ಅಮೃತಸರದ ಅಮೃತಪಾಲ್ ಸಿಂಗ್ ಎಂಬ ಸ್ಥಳೀಯರಲ್ಲದವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಗಾಯಗೊಂಡು ಅವರು ಸಾವನ್ನಪ್ಪಿದ್ದಾರೆ.

ಈ ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಶ್ರೀನಗರದಲ್ಲಿ ಅಮೃತ್ ಪಾಲ್ ಸಿಂಗ್ ಪ್ರಾಣ ಕಳೆದುಕೊಂಡ ಘಟನೆಯಿಂದ ಜೆಕೆಎನ್‌ಸಿ ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆಘಾತಕ್ಕೊಳಗಾಗಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪಗಳನ್ನು ಸೂಚಿಸಿದ್ದಾರೆ.

ನಮ್ಮ ಸಮಾಜದಲ್ಲಿ ಹಿಂಸಾಚಾರಕ್ಕೆ ಯಾವುದೇ ಅಸ್ಪದ ಇಲ್ಲ. ಇಂತಹ ಅನಾಗರಿಕ ಕೃತ್ಯಗಳು ನಾವು ಶ್ರಮಿಸುತ್ತಿರುವ ಪ್ರಗತಿ ಮತ್ತು ಶಾಂತಿಗೆ ಅಡ್ಡಿ" ಎಂದು ಪಕ್ಷದ 'ಎಕ್ಸ್' ಖಾತೆಯಲ್ಲಿ​ ಪೋಸ್ಟ್‌ ಮಾಡಲಾಗಿದೆ. ಮತ್ತೊಂದೆಡೆ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸಹ ದಾಳಿಯನ್ನು ಖಂಡಿಸಿದೆ.

SCROLL FOR NEXT